ಚಾಮರಾಜನಗರ: ‘ಮೈಸೂರು–ಕೊಡಗು ಹಾಗೂ ಚಾಮರಾಜನಗರ ಕ್ಷೇತ್ರದ ಮತದಾರರು ಪಕ್ಷದ ಅಭ್ಯರ್ಥಿಗಳಾದ ಎಂ.ಲಕ್ಷ್ಮಣ ಮತ್ತು ಸುನಿಲ್ ಬೋಸ್ ಅವರಿಗೆ ಮತ ನೀಡಿ ಕಾಂಗ್ರೆಸ್ ಅನ್ನು ಗೆಲ್ಲಿಸಬೇಕು’ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಮಹಾಂತೇಶ ಲಕ್ಷ್ಮಣ ಹಟ್ಟಿ ಶುಕ್ರವಾರ ಮನವಿ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಬ್ಬರೂ ಯುವಕರಾಗಿದ್ದು, ಕ್ಷೇತ್ರಗಳ ಅಭಿವೃದ್ಧಿಗಾಗಿ ದುಡಿಯಲ್ಲಿದ್ದಾರೆ. ಎರಡೂ ಕ್ಷೇತ್ರಗಳೂ ಸಿದ್ದರಾಮಯ್ಯ ಅವರ ತವರು ಕ್ಷೇತ್ರಗಳು. ಇಲ್ಲಿ ಇಬ್ಬರನ್ನೂ ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಬಲಪಡಿಸಬೇಕು’ ಎಂದರು.
‘ಕಾಂಗ್ರೆಸ್ ಪಕ್ಷವು ದಲಿತ ನಾಯಕರನ್ನು ದಾರಿ ತಪ್ಪಿಸುತ್ತಿದೆ ಎಂಬ ಬಿಜೆಪಿಯವರ ಹೇಳಿಕೆ ಬಾಲಿಶವಾಗಿದ್ದು, ಇದರಲ್ಲಿ ಹುರುಳಿಲ್ಲ. ಸಂವಿಧಾನ ಬದಲಾವಣೆ ಮಾಡಲು ಹೊರಟಿರುವ ಬಿಜೆಪಿ ಮತ್ತೆ ಗೆಲುವು ಸಾಧಿಸಿದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ. ಇದರ ವಿರುದ್ದ ಮತದಾರರು ಜಾಗೃತರಾಗಬೇಕು. ಪ್ರತಿ ಹಳ್ಳಿ ಹಳ್ಳಿಗಳಿಗು ಈ ಬಗ್ಗೆ ಅಭಿಯಾನ ಮಾಡಿ, ಸಂವಿಧಾನ ರಕ್ಷಣೆಗೆ ಬದ್ದವಾಗಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು’ ಎಂದರು.
‘ಕಾಂಗ್ರೆಸ್ 60 ವರ್ಷಗಳ ಆಡಳಿತ ಸೇವೆಯಲ್ಲಿ ದಲಿತರಿಗೆ ಅನೇಕ ಯೋಜನೆಗಳನ್ನು ಜಾರಿ ಮಾಡಿ, ಅಭಿವೃದ್ದಿ ಪಡಿಸಿದೆ. ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಪರವಾಗಿರುವ ಕಾಂಗ್ರೆಸ್ನಿಂದ ಮಾತ್ರ ಅಭಿವೃದ್ದಿ ಸಾಧ್ಯವಿದೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಅನುಕೂಲ ಕಲ್ಪಿಸಿದೆ. ಆ ಮೂಲಕ ಸಮ ಸಮಾಜವನ್ನು ನಿರ್ಮಾಣ ಮಾಡುತ್ತಿದೆ’ ಎಂದರು.
‘ಇಲ್ಲಿ ಸಂಸದರಾಗಿದ್ದ ಧ್ರುವನಾರಾಯಣ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಸುನಿಲ್ ಬೋಸ್ ಅವರು ಅದನ್ನು ಮುಂದುವರಿಸಲಿದ್ದಾರೆ’ ಎಂದರು.
ಅಹಿಂದ ಜವರಪ್ಪ ಮಾತನಾಡಿದರು. ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಹೊಸಹಳ್ಳಿ ಮಧುಸೂಧನ್, ಕಾಂಗ್ರೆಸ್ ಕಾರ್ಮಿಕ ವಿಭಾಗ ಪ್ರಧಾನ ಕಾರ್ಯದರ್ಶಿ ಹೆಗ್ಗವಾಡಿ ಕೆಂಪರಾಜು, ಮುಖಂಡರಾದ ಕಂಸಾಳೆ ರವಿ, ನಾಗರಾಜು ವಿಶ್ವಕರ್ಮ, ಕೆರಹಳ್ಳಿ ರೇವಣ್ಣ ಇದ್ದರು.