ಚಾಮರಾಜನಗರ: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆಯೇ ಹಬ್ಬಗಳು ಆರಂಭವಾಗಿದ್ದು, ಹಣ್ಣು ಹಾಗೂ ಹೂವಿನ ಧಾರಣೆಯಲ್ಲಿ ಕೊಂಚ ಏರಿಕೆಯಾಗಿದೆ.
ಈ ವಾರಾಂತ್ಯದಲ್ಲಿ ನಡೆಯಲಿರುವ ವರಮಹಾಲಕ್ಷ್ಮಿ ಹಬ್ಬಕ್ಕೆ ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ವಾರಾಂತ್ಯಕ್ಕೆ ಹೂವು, ಹಣ್ಣುಗಳ ಬೆಲೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ತರಕಾರಿಗಳ ಪೈಕಿ ಕೆಲ ತರಕಾರಿಗಳ ಬೆಲೆ ಹೆಚ್ಚಿದೆ.ಮೊಟ್ಟೆಯಲ್ಲಿ ಕೊಂಚ ಇಳಿಕೆ ಕಂಡುಬಂದರೆ ಮಾಂಸಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.
ಬಿಡಿಹೂವಿನಮಾರುಕಟ್ಟೆಯಲ್ಲಿ ಕನಕಾಂಬರ, ಮಲ್ಲಿಗೆ, ಮೊಳ್ಳೆ, ಗುಲಾಬಿ ಹೂವುಗಳ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಕಳೆದ ವಾರ ಕೆಜಿಗೆ ₹200–₹400ರವರೆಗೆ ಇದ್ದ ಕನಕಾಂಬರ, ಈ ವಾರ ₹1500–₹2000ವರೆಗೆ ಇದೆ. 100 ಗುಲಾಬಿಗಳ ಬೆಲೆ ₹200ಕ್ಕೆ ಏರಿದೆ. ಮಲ್ಲಿಗೆಗೆ ₹200–₹300ರವರೆಗೂ ಇದೆ. ಕಳೆದ ವಾರ ₹150ರವರೆಗೆ ಇತ್ತು.
‘ಇದೇ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವಿದೆ. ಹೀಗಾಗಿ, ಮಂಗಳವಾರದಿಂದ ಹೂವುಗಳ ಬೆಲೆಯಲ್ಲಿ ಏರಿಕೆಯಾಗಲಿದೆ. ಶ್ರಾವಣ ಮಾಸದಲ್ಲಿ ಸಾಮಾನ್ಯವಾಗಿ ಹೂವುಗಳಿಗೆ ಬೇಡಿಕೆ ಇರುತ್ತದೆ’ ಎಂದು ಬಿಡಿ ಹೂವುಗಳ ವ್ಯಾಪಾರಿ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆಷಾಢ ಮಾಸ ಮುಗಿದ ಬಳಿಕ ಶುಭ ಸಮಾರಂಭಗಳು ಜರುಗುತ್ತಿವೆ. ಹೀಗಾಗಿ ಕೆಲವು ತರಕಾರಿಗಳ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡು ಬರುತ್ತಿದೆ’ ಎನ್ನುತ್ತಾರೆ ಹಾಪ್ಕಾಮ್ಸ್ ವ್ಯಾಪಾರಿಗಳು.
ಈ ವಾರ ಮೊಟ್ಟೆ ದರ ಏರಿಕೆಯಾಗಿದೆ. ಕಳೆದ ವಾರ 100 ಮೊಟ್ಟೆಗೆ ₹ 352 (ಸೋಮವಾರದ ಬೆಲೆ) ಇತ್ತು. ಸೋಮವಾರ ₹ 367ಕ್ಕೆ ಏರಿದೆ. ಇನ್ನೆರಡು ದಿನಗಳಲ್ಲಿ ಮೊಟ್ಟೆ ಬೆಲೆ ಇಳಿಕೆಯಾಗಲಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.
ಮಾಂಸ ಮಾರುಕಟ್ಟೆಯಲ್ಲಿ ಎಲ್ಲ ಬಗೆಯ ಮಾಂಸಗಳ ಬೆಲೆ ಕಳೆದ ವಾರದಷ್ಟೇ ಮುಂದುವರಿದಿದೆ.
ವರಮಹಾಲಕ್ಷ್ಮಿ ಹಬ್ಬ: ಹಣ್ಣುಗಳಿಗೂ ಬೇಡಿಕೆ ಹಣ್ಣುಗಳ ಪೈಕಿ ಮೂಸಂಬಿ, ಕಿತ್ತಳೆಗೆಬೇಡಿಕೆ ಇದೆ. ಕಳೆದ ವಾರ₹ 80 ಇದ್ದ ಕಿತ್ತಳೆ ಈ ವಾರ₹ 100 ಆಗಿದೆ. ಮೂಸಂಬಿ₹ 80 ಇತ್ತು. ಈ ವಾರ₹ 90ಕ್ಕೆ ಏರಿದೆ.
‘ವರಮಹಾಲಕ್ಷ್ಮಿ ಹಬ್ಬಕ್ಕೆ ಹಣ್ಣುಗಳಿಗೂ ಬೇಡಿಕೆಇರುವುದರಿಂದ ಈ ವಾರ ಬೆಲೆ ಹೆಚ್ಚಲಿದೆ’ ಎಂದು ಹಾಪ್ಕಾಮ್ಸ್ ವ್ಯಾಪಾರಿ ಮಧು ಹೇಳುತ್ತಾರೆ.