ಚಾಮರಾಜನಗರ: ಗಣೇಶನ ಹಬ್ಬಕ್ಕೆ ಬೆರಳೆಣಿಕೆಯ ದಿನಗಳು ಬಾಕಿ ಇರುವಂತೆಯೇ ಹೂವಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆ ಏರುಮುಖವಾಗಿದೆ.
ಶ್ರಾವಣ ಮಾಸದ ಆರಂಭದಿಂದಲೂ ಹೂವಿನ ಧಾರಣೆ ಏರುತ್ತಿದ್ದು, ಈ ವಾರಾಂತ್ಯದಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದೇ 22ರಂದು ಆದಿತ್ಯವಾರ ಗಣೇಶನ ಹಬ್ಬ ಇದೆ.
ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕೆಜಿ ಕನಕಾಂಬರಕ್ಕೆ 1,000, ಮಲ್ಲಿಗೆ ಕೆಜಿಗೆ ₹240ರಿಂದ ₹280 ಇದೆ. ಕಾಕಡದ ದರ ₹200ರಿಂದ ₹240, ಚೆಂಡು ಹೂ ಹಳದಿ ಬಣ್ಣದ್ದಕ್ಕೆ ₹40, ಕೆಂಪು ಬಣ್ಣದ ಹೂವಿಗೆ ₹20 ಇದೆ. ಸುಗಂಧರಾಜಕ್ಕೆ ₹100–₹160ರವರೆಗೂ ಬೆಲೆ ಇದೆ.
‘ಸಾಮಾನ್ಯವಾಗಿ ಆಷಾಢ ಮಾಸ ಮುಗಿದು, ಶ್ರಾವಣ ಮಾಸದಲ್ಲಿ ಹೂವುಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಇನ್ನೀಗ ಹಬ್ಬಗಳು ಸಾಲು ಸಾಲಾಗಿರುವುದರಿಂದ ಬೇಡಿಕೆ ಬಂದಿದೆ. ಹಾಗಾಗಿ ಬೆಲೆಯೂ ಏರಿಕೆ ಕಂಡಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ತರಕಾರಿಗಳ ಪೈಕಿ ಬೀನ್ಸ್ ಬೆಲೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಹಾಪ್ಕಾಮ್ಸ್ನಲ್ಲಿ ₹25–₹30ರಷ್ಟಿದ್ದ ಬೀನ್ಸ್ ಬೆಲೆ ಈ ವಾರ ₹50ಕ್ಕೆ ಏರಿದೆ.
‘ಮಾರುಕಟ್ಟೆಗೆ ಬೀನ್ಸ್ನ ಆವಕದ ಪ್ರಮಾಣ ಕಡಿಮೆಯಾಗಿದೆ. ಹಾಗಾಗಿ ಬೆಲೆಯಲ್ಲಿ ಏರಿಕೆಯಾಗಿದೆ’ ಎಂದು ಹಾಪ್ಕಾಮ್ಸ್ ವ್ಯಾಪಾರಿ ಮಧು ಅವರು ಹೇಳಿದರು.
ಎರಡು ವಾರಗಳ ಹಿಂದೆ ಕೆಜಿಗೆ ₹15 ಇದ್ದ ಟೊಮೆಟೊ ಧಾರಣೆ, ಈ ವಾರ ₹25ಕ್ಕೆ ಹೆಚ್ಚಿದೆ. ಉಳಿದ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸ ಕಂಡು ಬಂದಿಲ್ಲ.
ಗಣೇಶನ ಹಬ್ಬದ ಸಂದರ್ಭದಲ್ಲಿ ಬೆಲೆ ಹೆಚ್ಚಳ ಸಾಧ್ಯತೆಯನ್ನು ವ್ಯಾಪಾರಿಗಳು ತಳ್ಳಿ ಹಾಕುತ್ತಿಲ್ಲ.
ಹಣ್ಣುಗಳ ಪೈಕಿ ಸೇಬಿನ ಬೆಲೆ ಕೆಜಿಗೆ ₹20ರಷ್ಟು, ಮೂಸಂಬಿ ₹10ರಷ್ಟು ಕಡಿಮೆಯಾಗಿದೆ. ಏಲಕ್ಕಿ ಹಾಗೂ ಪಚ್ಚೆ ಬಾಳೆ ಬೆಲೆ ಕೆಜಿಗೆ ಕ್ರಮವಾಗಿ ₹50 ಮತ್ತು ₹25ರಿಂದ–₹30ರವರೆಗೆ ಇದೆ. ಹಬ್ಬಕ್ಕೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.
ಮಾಂಸದ ಮಾರುಕಟ್ಟೆಯಲ್ಲಿ ಮೊಟ್ಟೆ, ಚಿಕನ್ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.