ಚಾಮರಾಜನಗರ: ಸಿದ್ದರಾಮಯ್ಯ ಅವರು ತಮ್ಮ ಅಹಂಕಾರದಿಂದಾಗಿ ಅಧಿಕಾರ ಕಳೆದುಕೊಂಡು ವಿರೋಧ ಪಕ್ಷದಲ್ಲಿ ಕುಳಿತಿದ್ದಾರೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ. ಪಾಟೀಲ ಅವರು ಟೀಕಿಸಿದರು.
‘ದನದ ಮಾಂಸ ತಿನ್ನುತ್ತೇನೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಸಿದ್ದರಾಮಯ್ಯ ಅವರು ಹಿರಿಯ ನಾಯಕರು. ಒಂದು ವರ್ಗದ ಜನರ ಭಾವನೆಗೆ ನೋವು ಉಂಟು ಮಾಡುವುದು ಅವರಿಗೆ ಶೋಭೆ ತರುವುದಿಲ್ಲ. ಅವರ ಹೇಳಿಕೆ ಖಂಡನೀಯ’ ಎಂದರು.
‘ಸಿದ್ದರಾಮಯ್ಯ ಅವರುಇಂತಹ ಅಹಂಕಾರದಿಂದಲೇ ಅಧಿಕಾರ ಕಳೆದುಕೊಂಡರು. ಮುಂದಿನ ಬಾರಿಯೂ ಕಾಂಗ್ರೆಸ್ ಅನ್ನು ವಿರೋಧ ಪಕ್ಷದಲ್ಲಿ ಕೂರಿಸುವ ಆಸೆ ಅವರಿಗಿದೆ. ಆದ್ದರಿಂದಲೇ, ಇಂತಹ ಮಾತುಗಳನ್ನಾಡುತ್ತಿದ್ದಾರೆ’ ಎಂದು ಸಿ.ಸಿ.ಪಾಟೀಲ ಅವರು ವ್ಯಂಗ್ಯವಾಡಿದರು.
ವಿಧಾನಪರಿಷತ್ ಉಪಸಭಾಪತಿ ಧರ್ಮೇಗೌಡ ಅವರ ಸಾವಿಗೆ ಪ್ರತಿಕ್ರಿಯಿಸಿ, ‘ಧರ್ಮೇಗೌಡ ಒಬ್ಬ ಧೀಮಂತ ರಾಜಕಾರಣಿ. ಪುಕ್ಕಲ ಅಲ್ಲ. ಹೋರಾಟ ಮಾಡಿಕೊಂಡು ಬಂದವರು. ಅವರನ್ನು ಈ ರೀತಿ ಕಳೆದುಕೊಳ್ಳುತ್ತೇವೆ ಎಂದುಕೊಂಡಿರಲಿಲ್ಲ’ ಎಂದರು.