ಚಾಮರಾಜನಗರ: ‘ಜನಸಾಮಾನ್ಯರಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಪ್ರಮುಖ ಉದ್ದೇಶ’ ಎಂದು ನಗರದ ಯೂನಿವರ್ಸ್ ಶಾಲೆಯ ಮುಖ್ಯಶಿಕ್ಷಕಿ ಎನ್.ವಿಜಯಲಕ್ಷ್ಮಿ ಬುಧವಾರ ಹೇಳಿದರು.
ಸೋಮವಾರಪೇಟೆಯ ಯೂನಿವರ್ಸ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭೌತ ವಿಜ್ಞಾನಿ ಸಿ.ವಿ.ರಾಮನ್ ಅವರು 1928ರ ಫೆ. 28 ರಂದು ‘ರಾಮನ್ ಎಫೆಕ್ಟ್’ ಅಧ್ಯಯನದ ವಿವರಗಳನ್ನು ಜಗತ್ತಿಗೆ ತಿಳಿಸಿದರು. ಈ ಸಾಧನೆಯ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನ ಎಂದು ಆಚರಿಸಲಾಗುತ್ತದೆ’ ಎಂದರು.
‘ಯುವಜನರು ವಿಜ್ಞಾನಕ್ಕೆ ಹೆಚ್ಚು ಒತ್ತು ನೀಡಬೇಕು. ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ವೈಜ್ಞಾನಿಕ ಸಂಶೋಧನೆ ನಡೆಯುವ ಅವಶ್ಯಕತೆ ಇದೆ’ ಎಂದು ವಿಜಯಲಕ್ಷ್ಮಿ ಪ್ರತಿಪಾದಿಸಿದರು.
ಶಾಲೆಯ ನೂರಕ್ಕೂ ಹೆಚ್ಚು ಮಕ್ಕಳು ತಾವು ತಯಾರಿಸಿದ ವೈವಿಧ್ಯಮಯ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು. ಶಿಕ್ಷಕಿಯರಾದ ಜ್ಯೋತಿ, ರಶ್ಮಿ, ಪಲ್ಲವಿ, ಭಾವನಾ, ಲಕ್ಷ್ಮಿಶ್ರೀ, ಮಾನಸ ಭಾಗವಹಿಸಿದ್ದರು.