ಗುಂಡ್ಲುಪೇಟೆ: ಕೊರೊನಾದ ಹೊಸ ತಳಿಯ ಒಮಿಕ್ರಾನ್ ವೈರಾಣು ಪತ್ತೆಯಾಗಿರುವುದರಿಂದ ತಾಲ್ಲೂಕಿನ ಗಡಿ ಭಾಗ ಮೂಲೆಹೊಳೆ ಹಾಗೂ ಕೆಕ್ಕನಹಳ್ಳ ಚೆಕ್ಪೋಸ್ಟ್ಗಳಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದ್ದು, ಕೇರಳದಿಂದ ಬರುತ್ತಿರುವವರ ಮೇಲೆ ನಿಗಾ ವಹಿಸಿದೆ.
ಕೇರಳದಿಂದ ಜಿಲ್ಲೆ ಪ್ರವೇಶಿಸುವವರು ಆರ್ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರುವುದೂ ಕಡ್ಡಾಯ. ಪ್ರಯಾಣಿಕರ ವಿವರ ಪಡೆದು, ಅವರ ಆರೋಗ್ಯ ಸ್ಥಿತಿಯ ಮೇಲೆ ಗಮನಹರಿಸಲು ಆರೋಗ್ಯ ಇಲಾಖೆ ಚೆಕ್ಪೋಸ್ಟ್ನಲ್ಲಿ ನಿಯೋಜಿಸಿರುವ ಸಿಬ್ಬಂದಿಗೆ ಸೂಚಿಸಿದೆ.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ಶನಿವಾರ ತಡರಾತ್ರಿ ಮೂಲೆಹೊಳೆ ಚೆಕ್ಪೋಸ್ಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಚೆಕ್ಪೋಸ್ಟ್ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
‘ತಮಿಳುನಾಡಿನ ಚೆಕ್ಪೋಸ್ಟ್ನಲ್ಲಿ ತಪಾಸಣೆ ಸಡಿಲ ಮಾಡಲಾಗಿತ್ತು. ಆದ್ದರಿಂದ ಕೇರಳದ ವಾಹನಗಳು ತಮಿಳುನಾಡು ಮಾರ್ಗದ ಮೂಲಕ ಹೆಚ್ಚು ಬರುತ್ತಿದ್ದವು. ಸದ್ಯ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ಅಲ್ಲಿನ ಚೆಕ್ಪೋಸ್ಟ್ನಲ್ಲೂ ತೀವ್ರ ತಪಾಸಣೆ ಮಾಡಲಾಗುತ್ತಿದೆ. ನಮ್ಮಲ್ಲೂ ಕಟ್ಟೆಚ್ಚರ ವಹಿಸಲಾಗುತ್ತಿದೆ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಗಡಿ ಭಾಗದಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ, ‘ಮೂಲೆಹೊಳೆ ಹಾಗೂ ಕೆಕ್ಕನಹಳ್ಳ ಚೆಕ್ಪೋಸ್ಟ್ಗಳಲ್ಲಿ ಬಿಗಿ ತಪಾಸಣೆ ನಡೆಸಲಾಗುತ್ತಿದೆ. ಕೇರಳದಲ್ಲಿ ಒಮಿಕ್ರಾನ್ ವೈರಾಣು ಪತ್ತೆಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆ ವಹಿಸಲಾಗಿದೆ. ಆರ್ಟಿಪಿಸಿಆರ್ ವರದಿ ನೆಗೆಟಿವ್ ಇದ್ದವರಿಗೆ ಮಾತ್ರ ಜಿಲ್ಲೆಗೆ ಪ್ರವೇಶ ನೀಡಲಾಗುತ್ತಿದೆ. ಕೋವಿಡ್ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದಿರುವ ಬಗ್ಗೆ ಪ್ರಮಾಣಪತ್ರವನ್ನೂ ಅವರು ತೋರಿಸಬೇಕು’ ಎಂದರು.
‘ಕೇರಳದಿಂದ ಬಂದ ಪ್ರಯಾಣಿಕರಲ್ಲಿ ಹೊಸ ಪ್ರಕರಣ ಏನಾದರೂ ಪತ್ತೆಯಾದರೆ, ಚಿಕಿತ್ಸೆ ನೀಡುವುದಕ್ಕಾಗಿ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಐದು ಹಾಸಿಗೆ ಮೀಸಲಿಡಲಾಗಿದೆ’ ಎಂದರು.
‘ಇದಲ್ಲದೇ ಜಿಲ್ಲೆಯ 170 ಗಡಿ ಗ್ರಾಮಗಳಲ್ಲೂ ಜನರಲ್ಲಿ ಜಾಗೃತಿ ಮೂಡಿಸಲು ಕ್ರಮವಹಿಸಲಾಗುತ್ತಿದೆ’ ಎಂದು ವಿಶ್ವೇಶ್ವರಯ್ಯ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.