ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಹೋಗುವ ಪ್ರವಾಸಿಗರನ್ನು ಬೇಸಿಗೆ ಕಾಲದಲ್ಲಿ ಹೂವು ಅರಳಿಸಿ ಆಕರ್ಷಿಸುತ್ತಿದ್ದ ಮುತ್ತುಗದ ಮರ ಈ ಸಲ ನವೆಂಬರ್ನಲ್ಲೇ ಜನರನ್ನು ಸೆಳೆಯಲು ಆರಂಭಿಸಿವೆ.
ಬಂಡೀಪುರದ ಅರಣ್ಯದಲ್ಲಿರುವ ಕೆಲವು ಮುತ್ತುಗದ ಮರಗಳು ಅವಧಿಗೆ ಮುನ್ನವೇ ಹೂವುಗಳನ್ನು ಬಿಟ್ಟಿವೆ.
ಬೇಸಿಗೆ ಸಮೀಪಿಸುತ್ತಿದ್ದ ಹಾಗೆ ಮಾಗಿಯ ಚಳಿಯಲ್ಲಿ ಹಸಿರು ಹೊದ್ದ ಮರಗಳೆಲ್ಲ ಎಲೆ ಕಳಚಿ ಬೆತ್ತಲಾಗಿ ಹೂವನ್ನು ಬಿಡುತ್ತವೆ. ತಮ್ಮ ಹೊಸ ಚಿಗುರೆಲೆಗಳನ್ನೇ ಹೂವಾಗಿಸಿಕೊಂಡು ಪ್ರಕೃತಿಯ ಸೊಬಗನ್ನು ಇಮ್ಮಡಿ ಗೊಳಿಸುತ್ತವೆ. ಮುತ್ತುಗದಂತಹ ಮರಗಳು ಹೂವು ಬಿಟ್ಟಾಗ ಕಾಡಿಗೆ ಕಿಚ್ಚು ಹೊತ್ತಿಕೊಂಡಂತೆ ಭಾಸವಾಗುತ್ತದೆ.
ನವೆಂಬರ್ - ಡಿಸೆಂಬರ್ ಮಾಸದ ಕೊರೆಯುವ ಚಳಿಯಲ್ಲಿ ಎಲೆ ಉದುರಿಸುವ ಮುತ್ತುಗ ಮರಗಳು ಜನವರಿ, ಫೆಬ್ರವರಿ ತಿಂಗಳಿನ ಆಸುಪಾಸಿನಲ್ಲಿ ಮೊಗ್ಗನ್ನು ಧರಿಸಿ, ಹೂವುಗಳನ್ನು ಅರಳಿಸುತ್ತವೆ.
ಬಂಡೀಪುರದ ಎಲೆ ಉದುರುವ ಮತ್ತು ಅರೆ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಅಲ್ಲಲ್ಲಿ ಗುಂಪಿನಲ್ಲಿ ಬೆಳೆವ ಈ ಮುತ್ತುಗ ಮರವು ಹಳದಿ ಮಿಶ್ರಿತ ಕೆಂಪು ಹೂಗಳನ್ನು ತೊಟ್ಟು, ಇಡೀ ಮರದ ತುಂಬೆಲ್ಲ ಹೂವುಗಳನ್ನು ಹೊದ್ದು ನಿಲ್ಲುವುದು ನಯನ ಮನೋಹರ ದೃಶ್ಯ.
ಮುತ್ತುಗದ ಮರದ ಹೂವು ಬಿಟ್ಟಾಗ ಅನೇಕ ಸಸ್ಯಹಾರಿ ಪ್ರಾಣಿಗಳು ಈ ಹೂವಿನ ದಳಗಳನ್ನು ತಿನ್ನುತ್ತವೆ. ಕಾಡಿನ ಮಂಗಗಳು, ಲಂಗೂರ್, ಅಳಿಲು ಸೇರಿದಂತೆ ಇತರೆ ಸಣ್ಣ ಪುಟ್ಟ ಪ್ರಾಣಿಗಳು ಈ ಮರದ ಬಳಿಯೇ ಸುಳಿದಾಡುತ್ತವೆ.
ಸೂರಕ್ಕಿ, ಕಾಡು ಮೈನಾ, ಪಿಕಳಾರ, ಗಿಳಿ ಹಕ್ಕಿ, ಹೊನ್ನಕ್ಕಿ, ಕಾಡು ಗುಬ್ಬಿ, ಕಾಜಾಣಗಳಂತಹ ಹಲವು ಸ್ಥಳೀಯ ಪಕ್ಷಿಗಳಿಗಲ್ಲದೆ ವಲಸೆ ಬರುವ ಗುಲಾಬಿ ಬಣ್ಣದ ಕಬ್ಬಕ್ಕಿ (ರೋಸಿ ಸ್ಟಾರ್ಲಿಂಗ್), ಉರುವಲು ಹಕ್ಕಿ (ವಾರ್ಬ್ಲರ್ ) ನಂತಹ ವಿವಿಧ ಹಕ್ಕಿಗಳು ಮುತ್ತುಗದ ಹೂವಿನ ಮಕರಂಧ ಹೀರಲು ಮರವನ್ನು ಆಶ್ರಯಿಸುತ್ತವೆ.
‘ಈ ವರ್ಷ ಅವಧಿಗೂ ಮೊದಲೇ ಹಲವು ಮುತ್ತುಗದ ಮರಗಳು ಬಂಡೀಪುರ ವ್ಯಾಪ್ತಿಯಲ್ಲಿ ಹೂವುಗಳನ್ನು ಅರಳಿಸಿ ಕಂಗೊಳಿಸುತ್ತಿವೆ. ಹವಾಮಾನದ ಬದಲಾವಣೆ ಇದಕ್ಕೆ ಕಾರಣವಿರಬಹುದು’ ಎಂದು ಪರಿಶರ ಪ್ರೇಮಿ ಶ್ರೀಕಂಠ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೆಲವೊಮ್ಮೆ ಅಕಾಲಿಕ ಮಳೆ, ಮಳೆಯಿಲ್ಲದೆ ಪ್ರಕೃತಿಯಲ್ಲಾಗುವ ಬದಲಾವಣೆಗೆ ಮರಗಿಡಗಳೂ ಒಗ್ಗಿಕೊಳ್ಳುತ್ತವೆ ಎಂಬುದಕ್ಕೆ ಇದೊಂದು ನಿದರ್ಶನ’ ಎಂದು ಅವರು ವಿವರಿಸಿದರು.
ಬಂಡೀಪುರದ ಸಫಾರಿಗೆ ತೆರಳುವವರು, ರಸ್ತೆಯಲ್ಲಿ ಸಂಚಾರ ಮಾಡುವವರು ಮುತ್ತುಗದ ಮರದ ಹೂವುಗಳ ಸೊಬಗನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಕ್ಯಾಮೆರಾಗಳಲ್ಲೂ ಸೆರೆ ಹಿಡಿಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.