ಯಳಂದೂರು: ತಾಲ್ಲೂಕಿನಾದ್ಯಂತ ಖಾಸಗಿ ಬಸ್ ಮತ್ತು ಲಾರಿ ಚಾಲಕರು ಬಂದ್ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಬುಧವಾರ ಖಾಸಗಿ ಬಸ್ಗಳ ಸಂಚಾರ ಸ್ಥಗಿತವಾಗಿದ್ದು, ಸರ್ಕಾರಿ ಬಸ್ ಪ್ರಯಾಣಕ್ಕೆ ಜನದಟ್ಟಣೆ ಕಂಡುಬಂತು.
ಸಾರ್ವಜನಿಕರು ಸರ್ಕಾರಿ ಬಸ್ ಅವಲಂಬಿಸಿ ಹೊರ ಜಿಲ್ಲೆಗಳಿಗೆ ತೆರಳುವ ಹಿನ್ನೆಲೆಯಲ್ಲಿ ಮುಗಿಬಿದ್ದಿದ್ದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿತ್ತು. ಖಾಸಗಿ ಬಸ್ ಇಲ್ಲದ ಕಾರಣ ಬಸ್ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚಾಗಿತ್ತು.
‘ಹೊಸ ಕಾನೂನು ಜಾರಿಯಾದಲ್ಲಿ ಅಪಘಾತ ಸಂದರ್ಭ ಚಾಲಕರಿಗೆ 7 ವರ್ಷ ಜೈಲು ಮತ್ತು 10 ಲಕ್ಷ ದಂಡ ಬೀಳಲಿದೆ. ಇಂತಹ ಅವೈಜ್ಞಾನಿಕ ಕಾಯ್ದೆ ಜಾರಿ ವಿರೋಧಿಸಿ ಒಂದು ದಿನ ವಾಹನ ಸಂಚಾರ ನಿರ್ಬಂಧಿಸಿದ್ದೇವೆ’ ಎಂದು ರವೀಂದ್ರ ಬಸ್ ನಿರ್ವಾಹಕ ಬಾಬು ಹೇಳಿದರು.
ಲಾರಿ ಚಾಲಕರ ಪ್ರತಿಭಟನೆ ಮುಂದುವರಿಯಲಿದ್ದು, ಪ್ರತಿಭಟನೆ ಹಿಂಪಡೆಯುವ ಬಗ್ಗೆ ಇನ್ನೂ ಒಮ್ಮತಕ್ಕೆ ಬಂದಿಲ್ಲ. ಆದರೆ, ಬಸ್ ಗುರುವಾರ ಎಂದಿನಂತೆ ಸಂಚರಿಸಲಿದೆ’ ಎಂದು ಚಾಲಕ ನಾಗೇಂದ್ರ ಹೇಳಿದರು.