ಚಾಮರಾಜನಗರ: ನಗರದ ಕೃಷ್ಣ ಪ್ರತಿಷ್ಠಾನದಿಂದ ಸೋಮವಾರ ಸರಳವಾಗಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
ಪ್ರತಿ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ಪ್ರತಿಷ್ಠಾನದಿಂದ ರಥದ ಬೀದಿಯಲ್ಲಿ ಹಬ್ಬದ ಮಾದರಿಯಲ್ಲಿ ಆಚರಣೆ ಮಾಡಲಾಗುತ್ತಿತ್ತು. ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿತ್ತು.ಕೋವಿಡ್ ಕಾರಣದಿಂದ ಈ ಬಾರಿ ಸರಳವಾಗಿ ಆಚರಿಸಲಾಯಿತು.
ನಗರದ ರಥದ ಬೀದಿಯಲ್ಲಿರುವ ಶ್ರೀ ರಾಮಶೇಷ ಪಾಠಶಾಲೆಯ ಮುಂಭಾಗ ಶ್ರೀಕೃಷ್ಣ ಭಾವಚಿತ್ರವಿಟ್ಟು, ಕೊಳಲು ಊದುತ್ತಿರುವ ಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ ಪಾಠಶಾಲೆಯ ಪ್ರಾಚಾರ್ಯರಾದ ಪ್ರದೀಪ್ಕುಮಾರ್ ದಿಕ್ಷೀತ್ ಅವರು ಪೂಜೆ ನೆರವೇರಿಸಿದರು. ಬಳಿಕ ಪ್ರಸಾದ ವಿತರಣೆ ಮಾಡಿದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರಿ ಅವರು ಶ್ರೀಕೃಷ್ಣನ ವಿಗ್ರಹಕ್ಕೆ ಪುಷ್ಪಾರ್ಷನೆ ಮಾಡಿ ಮಾತನಾಡಿ, ‘ಶ್ರೀ ಕೃಷ್ಣ ಜನ್ಮಾಷ್ಠಮಿ ವಿಶೇಷ ದಿನವಾಗಿದೆ. ಬೆಣ್ಣೆ ಎಂದರೆ ಬ್ರಹ್ಮಾಂಡವಾಗಿದೆ. ಶ್ರೀಕೃಷ್ಣ ಲೀಲೆಗಳು ಜಗತ್ತಿಗೆ ಪ್ರಸಿದ್ಧಿಯಾಗಿವೆ. ದೃಷ್ಟರ ಸಂಹಾರಕ್ಕೆ ಜನಿಸಿದ ಶ್ರೀ ಕೃಷ್ಣ ಎಲ್ಲರ ರಕ್ಷಕನಾಗಿದ್ದೇನೆ’ ಎಂದರು.
ಕೇಂದ್ರ ಬರ ಪರಿಹಾರ ಸಮಿತಿಯ ಅಧ್ಯಕ್ಷ ಎಂ.ರಾಮಚಂದ್ರ ಅವರು ಮಾತನಾಡಿ, ‘ಪ್ರತಿ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತಿತ್ತು. ಕೋವಿಡ್ ವೈರಸ್ ವ್ಯಾಪಿಸಿ ಜಗತ್ತು ಶೂನ್ಯವಾಗಿದೆ. ಸರ್ವ ಧರ್ಮಪಾಲಕನಾದ ಶ್ರೀಕೃಷ್ಣ ಪರಮಾತ್ಮ ಬಹುಬೇಗ ಕೋವಿಡ್ ತೊಲಗಿಸಿ, ಜನರು ನೆಮ್ಮದಿಯಿಂದ ಸಹಬಾಳ್ವೆ ಮಾಡುವಂತೆ ಕರುಣಿಸಲಿ’ ಎಂದು ಪ್ರಾರ್ಥಿಸಿದರು.
ಶ್ರೀಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಅವರು ಮಾತನಾಡಿ, ‘ಪ್ರತಿ ವರ್ಷದಂತೆ ಈ ಬಾರಿಯೂ ಕೋವಿಡ್ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರತಿಷ್ಠಾನದಿಂದ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗುತ್ತದೆ’ ಎಂದರು.
ಅನಿಲ್ಕುಮಾರ್ ದಿಕ್ಷೀತ್, ಕಾಳಿಕಾಂಬ ದೇವಸ್ಥಾನದ ಎಸ್. ನಂದೀಶ್ ವಿಶ್ವಕರ್ಮ, ಮುಖಂಡರಾದ ಎಸ್.ಸುರೇಶ್ನಾಯಕ, ವೇಣುಗೋಪಾಲ್, ಮಾರ್ಕೆಟ್ ಕುಮಾರ್, ರಾಮಪ್ರಸಾದ್, ಶ್ರೀನಿಧಿ ಇದ್ದರು.