ಚಾಮರಾಜನಗರ: ತಾಲ್ಲೂಕಿನ ಕಾಗಲವಾಡಿ ಗ್ರಾಮದಲ್ಲಿ ಬುಧವಾರ ಹಾವು ಕಚ್ಚಿ ರೈತ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಗ್ರಾಮದ ನಾಗರಾಜು ಎಂಬುವವರ ಪತ್ನಿ ಪಾರ್ವತಿ (41) ಮೃತಪಟ್ಟವರು. ದಂಪತಿ ಬುಧವಾರ ರಾಗಿ ಕಟಾವು ಮಾಡುವುದಕ್ಕಾಗಿ ತಮ್ಮ ಜಮೀನಿಗೆ ತೆರಳಿದ್ದರು.
ಕಟಾವು ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿ ಹೊಲದಲ್ಲಿದ್ದ ಹಾವು ಪಾರ್ವತಿ ಅವರಿಗೆ ಕಚ್ಚಿತು. ತಕ್ಷಣ ಅವರನ್ನು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು. ಆದರೆ, ಅದು ಫಲಕಾರಿಯಾಗಲಿಲ್ಲ. ವಿಷ ಏರಿದ್ದರಿಂದ ಪಾರ್ವತಿ ಅವರು ಮೃತಪಟ್ಟರು ಎಂದುಪೊಲೀಸರು ಹೇಳಿದ್ದಾರೆ.
ಪಾರ್ವತಿ ಅವರಿಗೆ ಪತಿ, ಪುತ್ರ, ಪುತ್ರಿ ಇದ್ದಾರೆ. ರಾಮಸಮುದ್ರ ಠಾಣೆಯಲ್ಲಿ ದೂರು ದಾಖಲಾಗಿದೆ.