ಯಳಂದೂರು:ತಾಲ್ಲೂಕಿನ ಅರಣ್ಯದ ಅಂಚಿನಲ್ಲಿ ಕಾಡಾನೆ ಮತ್ತಿತರ ವನ್ಯ ಜೀವಿಗಳನ್ನು ನಿಯಂತ್ರಿಸಲು ಅಳವಡಿಲಾಗಿದ್ದಸೌರಬೇಲಿ ಅಲ್ಲಲ್ಲಿ ಕಿತ್ತು ಬಂದಿದ್ದು, ಸ್ಥಳೀಯ ಕೃಷಿಕರಿಗೆ ತಲೆನೋವಾಗಿ ಪರಿಣಮಿಸಿದೆ.
ಹಲವು ವರ್ಷಗಳಿಂದ ಹಿಂದೆ ಅರಣ್ಯ ಇಲಾಖೆ ಕಾಡಂಚಿನ ಪ್ರದೇಶದಲ್ಲಿ ಸೌರಬೇಲಿ ನಿರ್ಮಿಸಿದೆ. ಈ ಬೇಲಿಕಿತ್ತು ಬಂದಿದ್ದು, ಕೆಲವೆಡೆ ತುಂಡಾಗಿ ಉರುಳಿ ಬಿದ್ದಿದೆ. ಈ ಮಾರ್ಗದಲ್ಲಿ ನುಸುಳಿಬರುವ ಕರಡಿ, ಕಾಡು ಹಂದಿ, ಆನೆಗಳಿಂದಾಗಿ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳನ್ನುಉಳಿಸಿಕೊಳ್ಳುವುದು ಹಿಡುವಳಿದಾರರಿಗೆ ಕಷ್ಟವಾಗಿದೆ.
‘ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಸೌರಬೇಲಿ ಹಾಳಾಗಿದೆ. ಇವುಗಳನ್ನು ದುರಸ್ತಿ ಪಡಿಸಬೇಕು. ಅರಣ್ಯ ಪ್ರದೇಶಕ್ಕೆ ಹೋಗಲುಅಲ್ಲಲ್ಲಿ ನಿರ್ಮಿಸಿರುವ ಕಬ್ಬಿಣದ ಗೇಟ್ನ್ನು ಕಾಡಾನೆಗಳು ಮುರಿಯುತ್ತಿವೆ. ನಂತರಪ್ರಾಣಿಗಳು ತೋಟಗಳಿಗೆ ಲಗ್ಗೆ ಇಡುತ್ತವೆ. ಇದರಿಂದ ಬೆಳೆ ಉಳಿಸಿಕೊಳ್ಳುವುದುಕಷ್ಟವಾಗುತ್ತದೆ’ ಎಂದು ಅರಣ್ಯದ ಅಂಚಿನ ಕೃಷಿಕರಾದ ನಂಜೇಗೌಡ ಮತ್ತು ಶಿವಣ್ಣಹೇಳುತ್ತಾರೆ.
‘ಸೌರಬೇಲಿ ಮುರಿದು ಬಿದ್ದಿರುವುದರಿಂದ ಬೇಟೆಗಾರರು ಹಾಗೂ ಮರಗಳ್ಳರು ಸುಲಭವಾಗಿ ಅರಣ್ಯಪ್ರವೇಶ ಪಡೆಯಬಹುದು. ಈ ಮೊದಲು ಅರಣ್ಯ ಇಲಾಖೆ ಅಧಿಕಾರಿಗಳ ಕಣ್ಣು ತಪ್ಪಿಸಿಕಳ್ಳಕಾಕರು ಅಡ್ಡದಾರಿ ಮೂಲಕ ಕಾನನದಲ್ಲಿ ನುಗ್ಗುತ್ತಿದ್ದರು. ಈಗ ಸುಲಭವಾಗಿ ಕಾಡುಪ್ರವೇಶಿಸಿ ಬೇಟೆಯಾಡಲು ಅವಕಾಶ ಸಿಕ್ಕಿದಂತೆ ಆಗುತ್ತದೆ. ಹಾಗಾಗಿ, ಈ ಮಾರ್ಗದಸೋಲಾರ್ ಬೇಲಿ ದುರಸ್ತಿ ಮಾಡಬೇಕು’ ಎಂದು ಕೃಷಿಕರು ಆಗ್ರಹಿಸಿದ್ದಾರೆ.
‘ಆಮೆಕೆರೆ ಡ್ಯಾಂನಿಂದ ಹೊಸೂರು, ಆಮೆಕೆರೆ, ಗೌಡಹಳ್ಳಿ ಭಾಗದ ಕೃಷಿಕರ ಜಮೀನಿಗೆ ಆನೆ,ಕಡವೆ, ಚಿರತೆ, ಮುಳ್ಳುಹಂದಿಗಳು ಲಗ್ಗೆ ಇಡುತ್ತವೆ. ರಾತ್ರಿ 8 ಗಂಟೆಗೆ ಇಳಿಯುವ ವನ್ಯಜೀವಿಗಳು ಫಸಲನ್ನು ಮುಗಿಸಿಯೇ ತೆರಳುತ್ತವೆ. ಹಾಗಾಗಿ, ಸಂಜೆ 4 ಗಂಟೆಗೆ ರೈತರುಬುತ್ತಿ ಕಟ್ಟಿಕೊಂಡು ಹೊಲ, ಗದ್ದೆ ಕಾಯಬೇಕಾದ ಸ್ಥಿತಿ ಇದೆ’ ಎಂದು ಮದ್ದೂರಿನ
ನಾಗಣ್ಣ, ಮಲಾರಪಾಳ್ಯ ಜಡೇಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಮಳೆಯನ್ನೇ ನಂಬಿಕೊಂಡ ರೈತರು ಖುಷ್ಕಿ ಭೂಮಿಗಳಲ್ಲಿ ವಾಣಿಜ್ಯ ಬೆಳೆಗಳಿಗೆ ಒತ್ತುನೀಡುತ್ತಾರೆ. ಇದರಿಂದ ವರ್ಷದ ಮನೆಯ ಖರ್ಚು ವೆಚ್ಚಗಳನ್ನು ಸರಿದೂಗಿಸಲುಸಾಧ್ಯವಾಗುತ್ತದೆ. ಮನೆ ಬಳಕೆಗೆ ರಾಗಿ, ತರಕಾರಿ, ಬಾಳೆ ಬೆಳೆಯುತ್ತಾರೆ. ಆದರೆ,ಪ್ರಾಣಿಗಳು ಲಗ್ಗೆ ಇಟ್ಟರೆ ಹಾಕಿದ ಬಂಡವಾಳವೂ ವಾಪಸ್ ಬರುವುದಿಲ್ಲ ಎಂಬುದು ರೈತರ ಚಿಂತೆ.
‘ಜಮೀನುಗಳ ಬಳಿ ಮಳೆ, ಬಿಸಿಲು ಎನ್ನದೆ ಮನೆ ಮಂದಿ ಕಾದದ್ದೇ ಬಂತು. ಫಸಲು ಮಾತ್ರ ಮನೆಸೇರಲಿಲ್ಲ. ಸೋಲಾರ್ ಬೇಲಿ ಕಿತ್ತು ಹೋದ ಪ್ರದೇಶದಲ್ಲಿ ಅಲ್ಪ ಜಾಗ ಸಿಕ್ಕರೂ ಸಾಕು ಆನೆ,ಕರಡಿ, ಚಿರತೆಗಳು ಆಹಾರ ಅರಿಸಿ ಬರುತ್ತವೆ’ ಎಂದು ಪಟ್ಟಣದ ಸುರೇಶ್ ಹೇಳಿದರು.
10 ವರ್ಷಗಳಷ್ಟು ಹಳೆಯದು
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಲಯ ಅರಣ್ಯಾಧಿಕಾರಿ (ಆರ್ಎಫ್ಒ) ಮಹದೇವಯ್ಯ ಅವರು, ‘ಗೌಡಹಳ್ಳಿ ಗುಡ್ಡ ಮತ್ತಿತರ ಕಡೆ ಅಳವಡಿಸಿರುವ ತಂತಿಯ ಕಬ್ಬಿಣ ಪಿಲ್ಲರ್ಗೆ 10 ವರ್ಷ ಆಗಿದೆ. ಹಾಗಾಗಿ, ದೃಢತೆಯನ್ನು ಕಳೆದುಕೊಂಡಿವೆ. ಪ್ರತಿ ವರ್ಷ ಬಿಸಿಲು, ಮಳೆ, ಗಾಳಿಗೆ ತರೆದುಕೊಳ್ಳುವ ಕಾರಣ ತಂತಿಗಳ ಧಾರಣಾ ಶಕ್ತಿಯೂ ಕಡಿಮೆಯಾಗುತ್ತದೆ. ಈಮಾರ್ಗದಲ್ಲಿ ಸೌರಬೇಲಿ ಅಳವಡಿಕೆಗೆ ಇಲಾಖೆ ಯೋಜನೆ ರೂಪಿಸುತ್ತಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.