ಮಂಗಳವಾರ, ಮಾರ್ಚ್ 28, 2023
31 °C

ಅವಳು ಕೊರಗಿ ಸಾಯಲಿ, ಶಾಹಿದ್ ದೆಹಲಿಯಿಂದ ಬರಲಿ: ದೇಗುಲದ ಹುಂಡಿಗೆ ವಿಚಿತ್ರ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ಇಲ್ಲಿನ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ಸಂದರ್ಭ, ದೇವರಿಗೆ ಭಕ್ತರು ಬರೆದಿರುವ ನಾನಾ ಬಗೆಯ ವಿಚಿತ್ರ ಪತ್ರಗಳು ಸಿಕ್ಕಿವೆ.

ಬಳ್ಳಾರಿ ಜಿಲ್ಲೆ ನಮೂದಿಸಿರುವ ಭಕ್ತ ಹನುಮಾರ್ ರಾಮ ನಾಯಕ ಎಂಬಾತ ‘ಬಾಯಲ್ಲಿ ರಕ್ತ ಬಿದ್ದು ಸಾಯಬೇಕು. ಇದನ್ನು ನೋಡಿ ನೀಲಾಬಾಯಿ ಕೊರಗಿ ಕೊರಗಿ ಸಾಯಬೇಕು. ನೀಲಗಿರಿ ನಾಯಕ, ಲೋಕೇಶಿ ನಾಯಕ, ಮುಕ್ಕಿಬಾಯಿ, ಇವರೆಲ್ಲರೂ ಕೂಡಾ ಅವರನ್ನು ನೋಡಿ ನರಳಿ ಸಾಯಬೇಕು. ಅವರೆಲ್ಲರೂ ನಮ್ಮ ಮನೆ ಹತ್ತಿರವೇ ಬಾರದ ಹಾಗೆ ಮಾಡಬೇಕು. ಇವರೆಲ್ಲರೂ ಒಂದು ವರ್ಷದ ಒಳಗೆ ಸಾಯಬೇಕು’ ಎಂದು ಕಾಗದದಲ್ಲಿ ಬರೆದು ಹುಂಡಿಯಲ್ಲಿ ಹಾಕಿದ್ದಾರೆ. ಬಳ್ಳಾರಿ ಭಕ್ತನ ಕಾಗದ ಓದಿದ ಹುಂಡಿ ಎಣಿಕೆ ಸಿಬ್ಬಂದಿ ದಂಗಾಗಿದ್ದಾರೆ.

ಅಂತರ ಧರ್ಮ ಪ್ರೀತಿ: ದೇವರಿಗೆ ಒಂದು ಅಂತರ ಧರ್ಮೀಯ ಪ್ರೀತಿ ಪತ್ರವೂ ಸಿಕ್ಕಿದೆ. ಅದರಲ್ಲಿ, ಯುವತಿಯೊಬ್ಬಳು ‘ಶಾಹಿದ್ ಖಾನ್ ವರ್ಷಕ್ಕೆ ಒಂದು ಬಾರಿಯಾದರೂ ದಿಲ್ಲಿಯಿಂದ ಬರಬೇಕು. ನಾನು ಹಿಂದೂ. ಅವನು ಮುಸ್ಲಿಂ. ಆದರೆ ನಾನು ತಪ್ಪು ಮಾಡುತ್ತಿಲ್ಲ. ನನಗೆ ಅವನಿಷ್ಟ, ಅವನಿಗೆ ನಾನಿಷ್ಟ. ನನ್ನ ಜೀವನವೇ ಅವನು. ಈ ಬೇಡಿಕೆ ಈಡೇರಿದರೆ ಪ್ರತಿ ತಿಂಗಳೊಮ್ಮೆ ನಿನ್ನ ಸನ್ನಿಧಿಗೆ ಬರುವೆ’ ಎಂದು ಯುವತಿ ಕಾಗದದಲ್ಲಿ ಬರೆದು ಹರಕೆ ಕಟ್ಟಿಕೊಂಡಿದ್ದಾರೆ.

ಮತ್ತೊಂದು ಕಾಗದದಲ್ಲಿ ನರಸಿಂಹ ಸ್ವಾಮಿ ಈ ನಂಬರುಗಳಿಗೆ ಮೊದಲನೇ ಬಹುಮಾನ ಬರುವಂತೆ ಮಾಡು. ನಿನ್ನ ಹುಂಡಿಗೆ ₹ 101 ಹಾಕುವುದಾಗಿ ಲಾಟರಿ ಟಿಕೆಟ್ ನಂಬರ್‌ಗಳನ್ನು ಬರೆದು ಕಾಣಿಕೆ ಹುಂಡಿಗೆ ಹಾಕಿದ್ದಾನೆ.

ದೇಗುಲದ ಹುಂಡಿಯಲ್ಲಿ ₹ 1.87 ಲಕ್ಷ ಹಣ ಸಂಗ್ರಹವಾಗಿದೆ.

ತಹಶೀಲ್ದಾರ್ ಮಂಜುಳಾ, ರಾಜಸ್ವ ನೀರಿಕ್ಷಕ ನಿರಂಜನ್, ಗ್ರಾಮ ಲೆಕ್ಕಿಗ ರಾಜೇಂದ್ರ, ಲಾವಣ್ಯ, ಪ್ರದೀಪ್, ಮಹೇಶ್ವರಿ, ಶ್ರೀಧರ್, ಸಿಬ್ಬಂದಿ ಅಶೋಕ್, ರಂಗಸ್ವಾಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು