ಹನೂರು: ತಾಲ್ಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಾಲಯದಲ್ಲಿ ಮೂರನೇ ದಿನದ ಶುಕ್ರವಾರವೂ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದಿದ್ದು, ಶನಿವಾರ ಮಧ್ಯಾಹ್ನದಿಂದ ಭಕ್ತರಿಗೆ ಮುಕ್ತವಾಗಲಿದೆ.
ಶುಕ್ರವಾರ ದುರ್ಗಾ ಹೋಮ ನಡೆಯಿತು.ಶುಕ್ರವಾರ ಬೆಳಿಗ್ಗೆ 9.40ಕ್ಕೆ ಪ್ರಾರಂಭವಾದ ಹೋಮ, ರಾತ್ರಿವರೆಗೂ ನಡೆಯಿತು. ಪ್ರಭಾರ ತಹಶೀಲ್ದಾರ್ ಕೆ.ಕುನಾಲ್ ಅವರು ಹೋಮದಲ್ಲಿ ಭಾಗಿಯಾದರು.
ಶನಿವಾರ ಬೆಳಿಗ್ಗೆ ಕುಂಭಾಭಿಷೇಕ ಹಾಗೂ ರುದ್ರಾಭಿಷೇಕ ನಡೆಯಲಿದೆ. ಬೆಳಿಗ್ಗೆಯಿಂದಲೇ ಈ ಅಭಿಷೇಕಗಳು ಜರುಗಲಿದ್ದು ಮಧ್ಯಾಹ್ನ 12 ಗಂಟೆಗೆ ಮುಕ್ತಾಯವಾಗಲಿವೆ. ಮಹಾಮಂಗಳಾರತಿ ನಂತರ ಭಕ್ತರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಇದಕ್ಕಾಗಿ ದೇವಾಲಯ ಮುಂಭಾಗ ಬ್ಯಾರಿಕೇಡ್ ನಿರ್ಮಿಸಲಾಗಿದ್ದು, ಶನಿವಾರ 12.30 ರ ಬಳಿಕ ಭಕ್ತರಿಗೆ ಮಾರಮ್ಮನ ದರ್ಶನಕ್ಕೆ ಅನುಕೂಲ ಕಲ್ಪಿಸಲಾಗಿದೆ.