ಚಾಮರಾಜನಗರ: ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ತಮ್ಮ ಪತ್ನಿ ರೂಪಾಂಜಲಿ ಅವರೊಂದಿಗೆ ಭಾನುವಾರ ನಗರದ ಹರಳುಕೋಟೆ ಆಂಜನೇಯ ಸ್ವಾಮಿ ದೇವಾಲಯ ಹಾಗೂ ದೀನಬಂಧು ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದರು.
ಹರಳುಕೋಟೆ ದೇವಾಲಯದಲ್ಲಿ ಗೊಗೊಯಿ ದಂಪತಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಕೊಳ್ಳೇಗಾಲದ ಸಿವಿಲ್ ನ್ಯಾಯಾಧೀಶ ಕೃಷ್ಣ ಅವರು ಸನ್ಮಾನಿಸಿದರು. ಗೊಗೊಯಿ ದಂಪತಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸಂಜೆ ನಗರದ ದೀನಬಂಧು ಸಂಸ್ಥೆಗೆ ಭೇಟಿ ನೀಡಿದ ಅವರು, ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿಸಿದ್ದ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್.ಜಯದೇವ್ ಅವರು ಸಂಸ್ಥೆಯ ಬಗ್ಗೆ ಪರಿಚಯ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಯದೇವ್ ಅವರು, ‘ರಂಜನ್ ಗೊಗೊಯಿ ಅವರು ಅಯೋಧ್ಯೆ ವಿವಾದದ ಬಗ್ಗೆ ಚಾರಿತ್ರಿಕ ತೀರ್ಪನ್ನು ಕೊಟ್ಟಿದ್ದಾರೆ. ಎಲ್ಲರಿಗೂ ಹಿತ ಬಯಸುವ ತೀರ್ಪಾಗಿದೆ. ದೇಶದ ಭವಿಷ್ಯ ಕಟ್ಟಲು ಅತ್ಯಂತ ಅಮೂಲ್ಯವಾದ ನಿರ್ಣಯ ನೀಡಿದ್ದೀರಿ ಮತ್ತು ಧರ್ಮ ಸಮನ್ವಯ ತೋರಿಸುವ ತೀರ್ಪಾಗಿದೆ’ ಎಂದು ತಿಳಿಸಿದರು.
ದೀನಬಂಧು ಸಂಸ್ಥೆ ವಿವೇಕಾನಂದರ ಆದರ್ಶ ಇಟ್ಟುಕೊಂಡು ಪ್ರಾರಂಭವಾಗಿದೆ ಎಂದು ಹೇಳಿದ ಅವರು ಎಂದ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ತಿಳಿಸಿದರು.
ದಿನಬಂಧು ಸಂಸ್ಥೆಯ ಆಡಳಿತಾಧಿಕಾರಿ ಪ್ರಜ್ಞಾ, ಮುಖಂಡ ಸಿ.ಎಂ.ವಿಜಯಕುಮಾರ್, ಹಾಗೂ ಮಕ್ಕಳು ಇದ್ದರು.
ರಾತ್ರಿ ಗೊಗೊಯಿ ದಂಪತಿ ಕೆ.ಗುಡಿಯಲ್ಲಿ ವಾಸ್ತವ್ಯ ಹೂಡಿದರು. ಸೋಮವಾರ ಬಿಳಿಗಿರಿರಂಗನಬೆಟ್ಟದಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ.