ಕೊಳ್ಳೇಗಾಲ: ಹುಲಿ ಉಗುರುಗಳು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಇಲ್ಲಿನ ಅರಣ್ಯ ಸಂಚಾರಿ ದಳದ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.ನಗರದ ದೊಡ್ಡ ನಾಯಕರ ಬೀದಿ ನಿವಾಸಿ ನಾರಾಯಣ ಹಾಗೂ ಪೋಸ್ಟ್ ಆಫೀಸ್ ರಸ್ತೆಯ ನಿವಾಸಿ ನಯೀಂ ಪಾಷ ಬಂಧಿತ ಆರೋಪಿಗಳು.
ಹುಲಿಯ ಎರಡು ಉಗುರುಗಳನ್ನು ಹೊಂದಿದ್ದ ಅವರು ಹೊಸ ಅಣಗಳ್ಳಿಯ ಬೆಂಗಳೂರಿನ ಮುಖ್ಯ ರಸ್ತೆಯಲ್ಲಿ ಆಟೊದಲ್ಲಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಎದುರುಗಡೆಯಿಂದ ಬಂದ ಅರಣ್ಯ ಸಂಚಾರಿ ದಳದ ಪೊಲೀಸರ ವಾಹನವನ್ನು ನೋಡಿ ಆರೋಪಿಗಳು ಆಟೋವನ್ನು ನಿಲ್ಲಿಸಿ ಓಡಲು ಆರಂಭಿಸಿದರು.
ಅನುಮಾನಗೊಂಡ ಅವರನ್ನು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದಾಗ, ಎರಡು ಹುಲಿ ಉಗುರುಗಳನ್ನು ಮಾರಾಟ ಮಾಡಲು ಹೋಗುತ್ತಿರುವುದಾಗಿ ಒಪ್ಪಿಕೊಂಡರು ಎಂದು ಪೊಲೀಸರು ಹೇಳಿದ್ದಾರೆ. ಆಟೊ ಹಾಗೂ ಹುಲಿ ಉಗುರುಗಳನ್ನು ಜಪ್ತಿ ಮಾಡಿರುವ ಪೊಲೀಸರು, ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್ಐ ಮುದ್ದು ಮಾದೇವ, ಸಿಬ್ಬಂದಿ ಗುರುಸ್ವಾಮಿ, ಲೋಕೇಶ್, ಕುಮಾರಸ್ವಾಮಿ, ಜಯಶಂಕರ್ ಇದ್ದರು.