ಗುಂಡ್ಲುಪೇಟೆ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಪಾರ್ವತಿ ಬೆಟ್ಟದಲ್ಲಿ ಭಾನುವಾರ ನಡೆದ ಜಾತ್ರಾ ಮಹೋತ್ಸವದಲ್ಲಿ ರಥದ ಚಕ್ರ ಹರಿದು ಯುವಕ ಮೃತ ಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಕಂದೇಗಾಲ ಗ್ರಾಮದ ಸರ್ಪಭೂಷಣ್ (27) ಮೃತ ಯುವಕ. ಅದೇ ಗ್ರಾಮದ ಸ್ವಾಮಿ (40) ಹಾಗೂ ಕೊಡಸೋಗೆ ಗ್ರಾಮದ ಕರಿನಾಯಕ (50) ಎಂಬುವವರ ಕಾಲು ಮುರಿದಿದೆ.
ಜಾತ್ರೆಯ ಅಂಗವಾಗಿ ನಡೆದ ರಥೋತ್ಸವದ ಸಂದರ್ಭದಲ್ಲಿ ಭಕ್ತರು ಒಮ್ಮೆಲೆ ತೇರು ಎಳೆದಿದ್ದರಿಂದ, ರಥ ವೇಗವಾಗಿ ಮುಂದೆ ಚಲಿಸಿತು. ಈ ವೇಳೆ ನೂಕು ನುಗ್ಗಲು ಉಂಟಾಗಿ ಸರ್ಪಭೂಷಣ್ ಅವರು ಕೆಳಕ್ಕೆ ಬಿದ್ದು ಚಕ್ರಕ್ಕೆ ಸಿಲುಕಿದರು. ರಥವು ಅವರ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ.
ಇನ್ನಿಬ್ಬರ ಕಾಲಿನ ಮೇಲೆ ತೇರು ಹರಿದಿದ್ದರಿಂದ ಕಾಲು ಮುರಿದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗಾಯಗೊಂಡವರಿಗೆ ಪಟ್ಟಣದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆನೀಡಿ, ಮೈಸೂರಿಗೆ ಕಳುಹಿಸಲಾಗಿದೆ.
ಶಾಸಕ ಸಿ.ಎಸ್. ನಿರಂಜನ ಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.