ಕೊಳ್ಳೇಗಾಲ: ಗುಂಡಿ ಬಿದ್ದಿರುವ ಮಣ್ಣಿನ ರಸ್ತೆಗಳು, ಹೂಳು ತುಂಬಿರುವ ಚರಂಡಿಗಳು, ಮುರಿದು ಬೀಳುವ ಸ್ಥಿತಿ ತಲುಪಿರುವ ಕುಡಿ ಯುವ ನೀರು ಟ್ಯಾಂಕ್, ಸ್ಮಾರಕವಾಗಿರುವ ನೀರಿನ ತೊಂಬೆಗಳು....
...ಇದು ತಾಲ್ಲೂಕಿನ ಲಕ್ಕರಸನಪಾಳ್ಯ ಗ್ರಾಮದಲ್ಲಿನ ದಿನನಿತ್ಯದ ಸಮಸ್ಯೆ. ಸಿದ್ದಯ್ಯನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮದಲ್ಲಿ ಸಮಸ್ಯೆಗಳದ್ದೇ ಕಾರುಬಾರು.
ಪರಿಶಿಷ್ಟರ ಬಡಾವಣೆಯಲ್ಲಿ ಚರಂಡಿ ನಿರ್ಮಿಸದಿರುವ ಪರಿಣಾಮ ಮನೆಗಳ ಮುಂಭಾಗವೇ ತ್ಯಾಜ್ಯ ನೀರು ಹರಿಯತ್ತದೆ. ಜನರು ಈ ಕಲ್ಮಷ ನೀರು ತುಳಿದುಕೊಂಡು ಮನೆಗೆ ಹೋಗಬೇಕಿದೆ. ಗ್ರಾಮದ ಕೆಲವು ಬೀದಿಗಳಲ್ಲಿ ಮನೆಗಳ ತ್ಯಾಜ್ಯ ನೀರು ಹೊರಹೋಗುವ ವ್ಯವಸ್ಥೆ ಇಲ್ಲದೆ ಕೊಳಚೆಯಲ್ಲಿ ಗ್ರಾಮಸ್ಥರು ವಾಸಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸೊಳ್ಳೆಗಳು ವಾಸಸ್ಥಾನ ಮಾಡಿಕೊಂಡು ರೋಗ ಹರಡಲು ಕಾರಣವಾಗಿದೆ.
ಜತೆಗೆ, ನೀರು ಹರಿಯುವ ಪ್ರದೇಶದಲ್ಲಿ ಕಳೆ ಗಿಡಗಳು ಬೆಳೆದು ನಿಂತಿವೆ. ಹುಳುಹುಪ್ಪಟೆ ಕಾಟಕ್ಕೆ ಜನರು ತತ್ತರಿಸುವಂತಾಗಿದೆ. ಈಗ ಮಳೆಗಾಲ ಆರಂಭವಾಗಿದೆ. ಚರಂಡಿ ನೀರಿನೊಂದಿಗೆ ಮಳೆ ನೀರು ಕೂಡ ಮನೆಗಳ ಮುಂಭಾಗವೇ ಸಂಗ್ರಹಗೊಳ್ಳುತ್ತಿದೆ. ಇದರಿಂದ ಜನರು ಸಂಚರಿಸಲು ಸಂಕಷ್ಟಪಡುವಂತಾಗಿದೆ. ಚರಂಡಿ ಸ್ವಚ್ಚತೆ ಗೊಳಿಸುವಂತೆ ಗ್ರಾಮಸ್ಥರ ಕೂಗು ಪಂಚಾಯಿತಿ ಗಮನಕ್ಕೆ ತಲುಪಿಲ್ಲ.
ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇತ್ತ ಗಮನಹರಿಸಿ ಕೂಡಲೇ ಚರಂಡಿ ಹೂಳು ತೆಗೆಸಿ ನೀರು ಸರಾಗವಾಗಿ ಹೊರಹೋಗುವ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮದ ಸಿದ್ದಮರಿ, ಪುಟ್ಟಯ್ಯ, ಮಹೇಶ್ ಒತ್ತಾಯಿಸಿದ್ದಾರೆ.
`ಓವರ್ ಹೆಡ್ ಟ್ಯಾಂಕ್ ಕುಸಿದು ಅನಾಹುತ ಸಂಭವಿಸುವ ಮುನ್ನ ಈ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು' ಎನ್ನುತ್ತಾರೆ ಗ್ರಾಮದ ಮುಖಂಡ ಸೋಮಣ್ಣ, ಸಿದ್ದರಾಜು, ನಿಂಗರಾಜು, ಚಂದ್ರಯ್ಯ, ಕೆಂಪಯ್ಯ.