ಕೊಳ್ಳೇಗಾಲ: ಸಮೀಪದ ಪಾಳ್ಯ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಚರಂಡಿ ಹೂಳೆತ್ತದ ಪರಿಣಾಮ ಮನೆಗಳ ಮುಂಭಾಗವೇ ತ್ಯಾಜ್ಯ ನೀರು ಹರಿಯುತ್ತಿದ್ದು, ಕೊಚ್ಚೆಯಲ್ಲಿಯೇ ಜನರು ನಿತ್ಯ ತಿರುಗಾಡುವಂತಾಗಿದೆ.
ಒಂದು ಬೀದಿಯಿಂದ ಮತ್ತೊಂದು ಬೀದಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದಲ್ಲಿರುವ ಮನೆಗಳ ಜನರ ಸಮಸ್ಯೆ ಹೇಳತೀರದು. ಕೆಲವು ಕಡೆ ಚರಂಡಿ ನಿರ್ಮಿಸಲಾಗಿದೆ. ಮಳೆಗಾಲ ಆರಂಭವಾದರೆ ಚರಂಡಿಯ ಕಲ್ಮಷ ನೀರು ಕೆಲವು ಮನೆಗಳ ಒಳಗೆ ನುಗ್ಗುತ್ತದೆ.
ಅಲ್ಲದೆ, ಈ ಬಡಾವಣೆ ಜನರು ಕಲ್ಮಷ ನೀರಿನಲ್ಲಿಯೇ ತೆರಳಿ ಮನೆ ಹೊಸ್ತಿಲು ತುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಚರಂಡಿ ಇರುವ ಬೀದಿಗಳಲ್ಲಿ ಸಂಗ್ರಹಗೊಂಡಿರುವ ಹೂಳು ಇಂದಿಗೂ ತೆಗೆಸಿಲ್ಲ. ಕಸ–ಕಡ್ಡಿ, ಪ್ಲಾಸ್ಟಿಕ್ಗಳು ತುಂಬಿ ನೀರು ಹೊರಹೋಗದೆ ಕೆಟ್ಟ ವಾಸನೆಯೊಂದಿಗೆ ಜನರು ರೋಗರುಜಿನಗಳ ಭೀತಿ ಎದುರಿಸುವಂತಾಗಿದೆ. ಚರಂಡಿಯಲ್ಲಿ ಕಲ್ಮಷ ತುಂಬಿರುವುದರಿಂದ ಸೊಳ್ಳೆಗಳ ವಾಸಸ್ಥಾನವಾಗಿದೆ.
ಹೊಸ ಬಡಾವಣೆಯಲ್ಲಿ ಬಹುತೇಕ ಮಣ್ಣಿನ ಗೋಡೆ ಮನೆ ಮತ್ತು ಗುಡಿಸಿಲುಗಳು ಇದ್ದು, ಪಕ್ಕದಲ್ಲಿಯೇ ಜಮೀನು ಇದೆ. ಮಳೆಗಾಲದಲ್ಲಿ ಜಮೀನಿನ ನೀರು ಈ ಬಡಾವಣೆಗೆ ನುಗ್ಗುತ್ತದೆ. ಅಲ್ಲದೆ, ಮನೆಗಳ ಗೋಡೆ ಬದಿಯೇ ಚರಂಡಿ ಇದೆ. ಹೀಗಾಗಿ, ಗೋಡೆಗಳು ತೇವಾಂಶದಿಂದ ಶಿಥಿಲಗೊಳ್ಳುತ್ತಿವೆ.
ಬಡಾವಣೆಯಲ್ಲಿ ಉತ್ತಮ ರಸ್ತೆ ನಿರ್ಮಿಸಿಲ್ಲ. ಕೆಲವು ಭಾಗದಲ್ಲಿ ಹಲವು ವರ್ಷಗಳ ಹಿಂದೆ ಹಾಕಿದ್ದ ಮಣ್ಣಿನ ರಸ್ತೆ ಹದಗೆಟ್ಟಿದೆ. ಮಳೆಗಾಲದಲ್ಲಿ ಈ ರಸ್ತೆಗಳು ಕೊಚ್ಚೆ ಗುಂಡಿಯಾಗಿ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಈ ಬಡಾವಣೆಯ ಜನರಿಗಾಗಿ ಕೊರೆಯಿಸಲಾದ ಕೊಳವೆಬಾವಿಗಳು ಕಸದ ಜೊತೆ ಸೇರಿಹೋಗಿವೆ. ಕೈಪಂಪುಗಳ ದುರಸ್ತಿ ನಡೆದಿಲ್ಲ. ಕೆಲವು ಬಡಾವಣೆಗಳಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ವಿದ್ಯುತ್ ಅಸಮರ್ಪಕ ಪೂರೈಕೆ ಹಾಗೂ ಅಂತರ್ಜಲ ಕುಸಿತದ ಪರಿಣಾಮ ಜನರು ನೀರು ಬಂದ ವೇಳೆಯಲ್ಲಿ ಹಿಡಿಯಬೇಕಾದ ಸ್ಥಿತಿ ಇದೆ.ಬಸ್ನಿಲ್ದಾಣದ ತಂಗುದಾಣ ಅವ್ಯವಸ್ಥೆಯಿಂದ ಕೂಡಿದೆ. ಸರ್ಕಾರಿ ಶಾಲೆ ಅಕ್ಕಿಪಿಕ್ಕಿಗಳ ವಾಸಸ್ಥಾನವಾಗಿದೆ.
‘ಗ್ರಾಮವು ಹೋಬಳಿ ಕೇಂದ್ರವಾಗಿದ್ದು, ಗ್ರಾಮ ಪಂಚಾಯಿತಿ ಕಚೇರಿ ಇಲ್ಲೇ ಇದೆ. ಆದರೂ, ಬಡಾವಣೆಯಲ್ಲಿನ ಚರಂಡಿಗಳ ಹೂಳುತೆಗೆಸಿ ಜನರಿಗೆ ಮೂಲಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಅಧಿಕಾರಿಗಳು ಮುಂದಾಗಿಲ್ಲ. ಈಗಲಾದರೂ ಸಂಬಂಧಪಟ್ಟವರು ಕ್ರಮ ವಹಿಸಲಿ’ ಎಂಬುದು ಗ್ರಾಮದ ಮರಿಸಿದ್ದಯ್ಯ, ಸಿದ್ದಯ್ಯ, ಸಾವಕಯ್ಯ, ಶ್ರೀನಿವಾಸ ನಾಯಕ, ಗೋವಿಂದ ನಾಯಕ ಹಾಗೂ ಇತರರ ಮನವಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.