ಕೊಳ್ಳೇಗಾಲ: ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಲಭಿಸಿದರೆ ಅವರೂ ಕೂಡ ಉತ್ತಮ ಸಾಧನೆ ಮಾಡುತ್ತಾರೆ. ಮಕ್ಕಳಲ್ಲಿಯೂ ಸಾಮಾಜಿಕ ಕಳಕಳಿ ಹಾಗೂ ಅಭಿವೃದ್ಧಿಪರ ಚಿಂತನೆ ಇದೆ ಎಂಬುದಕ್ಕೆ ತಾಲ್ಲೂಕಿನ ಪಾಳ್ಯ ಗ್ರಾಮದ ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಂ. ಮಧು ಎಂಬ ಗ್ರಾಮೀಣ ಪ್ರತಿಭೆಯೇ ಸಾಕ್ಷಿ.
ಶಿಕ್ಷಕರು ಮತ್ತು ಪೋಷಕರ ಸಹಕಾರ ಲಭಿಸಿದರೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆ ಎಂಬುದಕ್ಕೆ ಈ ವಿದ್ಯಾರ್ಥಿ ಮಾದರಿ.
ಮಧು ನೀರಿನಲ್ಲಿ ಮಿಶ್ರಣವಾದ ಇಂಧನವನ್ನು ಬೇರ್ಪಡಿಸುವ ಸಾಧನವನ್ನು ಅನ್ವೇಷಿಸಿದ್ದಾನೆ.
ಶಕ್ತಿ ಸಂಪನ್ಮೂಲಗಳಲ್ಲಿ ಪ್ರಮುಖವಾಗಿರುವ ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆ ಹಾಗೂ ಸಾಗಣೆ ಸಂದರ್ಭದಲ್ಲಿ ಉಂಟಾಗುವ ಸೋರಿಕೆಯಿಂದ ಇಂಧನ ಸಮುದ್ರದ ನೀರಿನಲ್ಲಿ ಸೇರಿಕೊಳ್ಳುತ್ತದೆ. ಈ ರೀತಿ ಸಮುದ್ರದ ನೀರಿನಲ್ಲಿ ಸೇರಿಕೊಂಡ ಖನಿಜ ತೈಲವನ್ನು ಸಮುದ್ರದ ನೀರಿನಿಂದ ಬೇರ್ಪಡಿಸುವ ಯಂತ್ರದ ಮಾದರಿಯನ್ನು ತಯಾರಿಸಿರುವ ಮಧು ಅ. 6ರಿಂದ 8ರವರೆಗೆ ನವದೆಹಲಿಯ ಐಟಿಪಿಒ ಪ್ರಗತಿ ಮೈದಾನದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಇನ್ಸ್ಪೈರ್ ಅವಾರ್ಡ್ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದಾನೆ.
ಉತ್ತಮ ಸಾಧನೆಯ ನಿರೀಕ್ಷೆ
ಜು. 24ರಂದು ಕೊಳ್ಳೇಗಾಲದ ಅಸಿಸಿ ಪ್ರೌಢಶಾಲೆ ಆವರಣದಲ್ಲಿ ನಡೆದ ಜಿಲ್ಲಾಮಟ್ಟದ ಪ್ರದರ್ಶನದಲ್ಲಿ,
ಸೆ. 12ರಿಂದ 14ರ ವರೆಗೆ ಹಾಸನದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ರಾಜ್ಯಮಟ್ಟದ ಪ್ರದರ್ಶನದಲ್ಲಿ ಪಾಲ್ಗೊಂಡು ಈಗ ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾರ್ಡ್ ಪ್ರದರ್ಶನಕ್ಕೆ ಆಯ್ಕೆಗೊಂಡಿದ್ದಾನೆ. ರಾಷ್ಟ್ರಮಟ್ಟದಲ್ಲಿಯೂ ಉತ್ತಮ ಸಾಧನೆಯ ನಿರೀಕ್ಷೆ ಇದೆ.
ಮಾರ್ಗದರ್ಶಿ ಶಿಕ್ಷಕ ಜಿ. ನವೀನ್ಕುಮಾರ್
ವಿಜ್ಞಾನ ಕ್ಷೇತ್ರದಲ್ಲಿ ಸಾಧನೆಯ ಆಸೆ
ಶಿಕ್ಷಕ ಜಿ. ನವೀನ್ಕುಮಾರ್, ಸಂಸ್ಥೆಯ ಕಾರ್ಯದರ್ಶಿ ಎಸ್. ಪ್ರವೀಣ್, ಮುಖ್ಯಶಿಕ್ಷಕ ಹಾಗೂ ಪೋಷಕರ ಸಹಕಾರದಿಂದ ನಾನು ತಯಾರಿಸಿದ ಮಾದರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ರಾಷ್ಟ್ರೀಯ ಮಟ್ಟದಲ್ಲೂ ಈ ಮಾದರಿಗೆ ಪ್ರಶಸ್ತಿ ದೊರೆಯುವ ನಂಬಿಕೆ ಇದೆ. ಮುಂದೆ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬುದು ನನ್ನ ಗುರಿಯಾಗಿದೆ.
ಎಂ. ಮಧು, ‘ಇನ್ಸ್ಪೈರ್ ಅವಾರ್ಡ್’ ರಾಷ್ಟ್ರಮಟ್ಟದ ಪ್ರದರ್ಶನಕ್ಕೆ ಆಯ್ಕೆಯಾದ ವಿದ್ಯಾರ್ಥಿ