ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರಾಜು ಅವರ ಪತ್ನಿ ಸುಜಾತ ಅವರು ಚಿಕ್ಕಬಾಣಾವರದಲ್ಲಿ ಮಹಿಳೆಯರಿಗೆ ಬಳೆ ತೊಡಿಸಿ, ಅರಿಶಿನ ಕುಂಕುಮ ಕೊಟ್ಟು ಮತ ಕೇಳಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಸ್ತ್ರೀಶಕ್ತಿ ಸಂಘದ ಮಹಿಳೆ ತಿಳಿಸಿದರು.
‘ಸ್ತೀಶಕ್ತಿ ಗುಂಪುಗಳಿಗೆ ವಿಶೇಷ ಸಭೆ ಇದೆ ಎಂದು ಹೇಳಿ ಕರೆಸಿದರು. ಸಭೆಗೆಂದು ಬಂದ ಮಹಿಳೆಯರಿಗೆ ಗೌರಿ ಹಬ್ಬದಲ್ಲಿ ಬಾಗಿನ ನೀಡುವಂತೆ ಎಲ್ಲರಿಗೂ ಉಡಿ ತುಂಬಿದರು’ ಎಂದರು. ‘ನನ್ನ ಗಂಡನಿಗೆ ಮತ ಹಾಕಿ. ಈ ಸಾರಿ ಗೆದ್ದರೆ ಮೂರನೇ ಬಾರಿ ಅವಕಾಶ ಸಿಕ್ಕಂತಾಗುತ್ತದೆ. ಮಾಡಬೇಕಾಗಿರುವ ಅಭಿವೃದ್ಧಿ ಕೆಲಸಗಳು ಸಾಕಷ್ಟು ಇವೆ. ನಿಮ್ಮ ಕಷ್ಟದಲ್ಲಿ ನಾವು ಭಾಗಿಯಾಗುತ್ತೇವೆ. ಮುತ್ತೈದೆ ಭಾಗ್ಯದ ಎಲ್ಲಾ ಸಂಕೇತಗಳನ್ನು ಉಡುಗೊರೆಯಾಗಿ ಕೊಟ್ಟಿದ್ದೇನೆ. ಮತ ಹಾಕುವ ಭರವಸೆ ನೀಡಿ ಎಂದು ಸುಜಾತಾ ಕೋರಿದರು’ ಎಂದರು.
‘ಸ್ತ್ರೀಶಕ್ತಿ ಗುಂಪಿನ ಮಹಿಳೆಯರು ಬಿಜೆಪಿ ಏಜೆಂಟರಲ್ಲ. ಸ್ವಾವಲಂಬನೆಯಿಂದ ಬದುಕು ಸಾಧಿಸಲು ಸಂಘ ರೂಪಿಸಿಕೊಂಡಿದ್ದೇವೆ. ಇವರೇನು ನಮ್ಮ ಬದುಕು ಉದ್ಧಾರ ಮಾಡುವುದು’ ಎಂದು ಮಹಿಳೆಯೊಬ್ಬರು ಪ್ರಶ್ನಿಸಿದರು.
‘ಬಿಜೆಪಿಯ ಕೆಲ ಮುಖಂಡರು ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ. ಈ ಬೆಳವಣಿಗೆ ಶಾಸಕರಲ್ಲಿ ನಡುಕ ಹುಟ್ಟಿಸಿದೆ’ ಎಂದು ಗ್ರಾಮದ ಕೆಲವು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.