ಚಿಂತಾಮಣಿ: ನಗರದಲ್ಲಿ ನಿವೃತ್ತ ನೌಕರರ ಸಂಘದ ಕಚೇರಿ ನಿರ್ಮಾಣಕ್ಕೆ ₹ 2.5 ಲಕ್ಷ ಮಂಜೂರಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಯ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದು ತಾಲ್ಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ಸಭೆಯಲ್ಲಿ ಮಾತನಾಡಿದರು.
ಸಂಘದ ವಾರ್ಷಿಕ ಮಹಾಸಭೆಯನ್ನು 2021ರ ಜನವರಿ 9ರಂದು ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ನಿವೃತ್ತ ನೌಕರರು ಹಾಗೂ ಪಿಂಚಣಿ ಪಡೆಯುತ್ತಿರುವವರು ಡಿ. 31ರ ಒಳಗಾಗಿ ಲೈಫ್ ಸರ್ಟಿಫಿಕೇಟ್ ಅನ್ನು ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ ಶಾಖೆಗಳಿಗೆ ಸಲ್ಲಿಸಬೇಕು ಎಂದು ತಿಳಿಸಿದರು.
ಪ್ರತಿ ವರ್ಷ ನ. 30ರ ಒಳಗಾಗಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕಾಗಿತ್ತು. ಈ ವರ್ಷ ಕೋವಿಡ್-19 ಹಿನ್ನೆಲೆಯಲ್ಲಿ ಡಿ. 31ರವರೆಗೂ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಎನ್. ಗೋಪಾಲರೆಡ್ಡಿ ನಿವೃತ್ತಿಯ ಅಂಚಿನಲ್ಲಿರುವ ನೌಕರರ ಸಮಸ್ಯೆ ಕುರಿತು ಮಾತನಾಡಿದರು. ವೆಂಕಟೇಶಪ್ಪ ಆಧ್ಯಾತ್ಮಿಕತೆ ಕುರಿತು ಉಪನ್ಯಾಸ ನೀಡಿದರು. ಕೆ.ಎಲ್. ನರಸಿಂಹಮೂರ್ತಿ ಹಾಸ್ಯ ಚಟಾಕಿ ಹಾರಿಸಿ ರಂಜಿಸಿದರು. ಸ್ನೇಹಜೀವಿ ಕಲಾ ತಂಡದ ಆರ್.ವಿ. ವೆಂಕಟರಾಮರೆಡ್ಡಿ, ಎಸ್.ಎಫ್.ಎಸ್. ಸುರೇಶ್, ಎ. ನಾರಾಯಣಸ್ವಾಮಿ, ಜಿ. ಕೃಷ್ಣಪ್ಪ ನಡೆಸಿಕೊಟ್ಟ ಗಾಯನ ಕಾರ್ಯಕ್ರಮ ಮುದ ನೀಡಿತು.
ಸಂಘದ ಉಪಾಧ್ಯಕ್ಷ ಎ.ಎಸ್. ರಾಮಚಂದ್ರಮೂರ್ತಿ, ಪ್ರಧಾನ ಕಾರ್ಯದರ್ಶಿ ಎಸ್. ಆಂಜನಪ್ಪ, ಪದಾಧಿಕಾರಿಗಳಾದ ಕೆ.ಎನ್. ನಂಜುಂಡಗೌಡ, ವೆಂಕಟಸ್ವಾಮಿ, ಜಿಲ್ಲಾ ಘಟಕದ ಉಪಾಧ್ಯಕ್ಷ ಎನ್. ಲಕ್ಷ್ಮೀನಾರಾಯಣ, ಎ. ಚಂದ್ರಶೇಖರಬಾಬು ಹಾಜರಿದ್ದರು.