ಬಾಗೇಪಲ್ಲಿ: ಗಂಡು ಮಗು ಬೇಕು ಎಂದು ಕಾನೂನು ಬಾಹಿರವಾಗಿ ಲಿಂಗಪರೀಕ್ಷೆ ಮಾಡಿಸಿಕೊಂಡ ಮಹಿಳೆಯೊಬ್ಬರಿಗೆ ಮತ್ತೊಮ್ಮೆ ಹೆಣ್ಣು ಆಗಲಿದೆ ಎಂದು ಗೊತ್ತಾಗಿದೆ. ಆ ಭಯದಿಂದ,ಪಟ್ಟಣದ ಹೊರವಲಯದ ಕೊತ್ತಪಲ್ಲಿ ಗ್ರಾಮದ ಮನೆಯಲ್ಲಿಯೇ ಗರ್ಭಪಾತ ಮಾಡಿಸಿಕೊಂಡು ತೀವ್ರರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.
ಶ್ರೀಕನ್ಯಾ(28) ಮೃತಪಟ್ಟವರು. ತಾಲ್ಲೂಕಿನ ಪರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ತಪಲ್ಲಿ ಗ್ರಾಮದಲ್ಲಿ ಶ್ರೀಕನ್ಯಾ ಹಾಗೂ ಪತಿ ಸೋಮಶೇಖರ್ ವಾಸವಾಗಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಮೂರನೇ ಮಗು ಗಂಡು ಬೇಕು ಎಂದು ಪತಿ ಸೋಮಶೇಖರ್ ಹಾಗೂ ಕುಟುಂಬದವರು ಶ್ರೀಕನ್ಯಾಗೆ ಈ ಹಿಂದೆ ಗರ್ಭಪಾತ ಮಾಡಿಸಿದ್ದಾರೆ. ನ.16ರಂದೂ ಶ್ರೀಕನ್ಯಾರವರಿಗೆ ಮತ್ತೊಮ್ಮೆ ಮನೆಯಲ್ಲಿಯೇ ಗರ್ಭಪಾತ ಮಾಡಿಸಿದ್ದಾರೆ. ಇದರಿಂದ ತೀವ್ರರಕ್ತಸ್ರಾವ ಉಂಟಾಗಿದೆ. ಆರೋಗ್ಯದಲ್ಲಿ ಏರುಪೇರು ಆಗಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಗುರುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.