ಬಾಗೇಪಲ್ಲಿ: ಪಟ್ಟಣದ ಹೊರವಲಯದ ಚಿತ್ರಾವತಿ ಎಕೋ ಉದ್ಯಾನವನ್ನು ಪುರಸಭಾ ಆಡಳಿತ ಮಂಡಳಿ ಸೂಕ್ತ ನಿರ್ವಹಣೆ ಮಾಡದೇ ಇರುವುದರಿಂದ ತನ್ನ ಮೂಲ ಅಸ್ತಿತ್ವ ಕಳೆದುಕೊಂಡಿದೆ.
ಪಟ್ಟಣದ ವ್ಯಾಪ್ತಿಯಲ್ಲಿ 23 ವಾರ್ಡ್ ಇದ್ದು ತಾಲ್ಲೂಕು ಕೇಂದ್ರಸ್ಥಾನ ಆಗಿದೆ. ಆದರೆ ಒಂದು ವಾಯುವಿಹಾರ ಕೇಂದ್ರ, ಉದ್ಯಾನ ಸೂಕ್ತವಾಗಿ ಜನರ ಬಳಕೆಗೆ ಬಂದಿಲ್ಲ. ಪಟ್ಟಣದ ವ್ಯಾಪ್ತಿಯಲ್ಲಿ ಮೀಸಲಿಟ್ಟಿದ್ದ 66 ಉದ್ಯಾನ ನಿವೇಶನಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ.
ಪಟ್ಟಣದ ಹೊರವಲಯದ ಜಡಲಭೈರವೇಶ್ವರ ದೇವಾಲಯದ ಮುಂದೆ 2004ರಲ್ಲಿ ಅಂದಿನ ಶಾಸಕ ಜಿ.ವಿ.ಶ್ರೀರಾಮರೆಡ್ಡಿ 6 ಎಕರೆ ಪ್ರದೇಶದಲ್ಲಿ ಚಿತ್ರಾವತಿ ಎಕೋ ಉದ್ಯಾನದ ಭೂಮಿಪೂಜೆ ಮಾಡಿದ್ದರು. 2021ರಲ್ಲಿ ಉದ್ಯಾನವನ್ನು ಉದ್ಘಾಟಿಸಲಾಗಿದೆ.
ವಿಶಾಲವಾದ ಉದ್ಯಾನದಲ್ಲಿ ಮೊದಲಿಗೆ ವಾಯುವಿಹಾರ ಪಥ, ಸುಂದರವಾದ ಗಿಡ, ವಿವಿಧ ಬಗೆಯ ಮರ ನೆಡಲಾಗಿತ್ತು. ಆಟಿಕೆಗಳು, ಜಾರುವ ಬಂಡೆ, ಉಯ್ಯಾಲೆ ಮಾಡಲಾಗಿದೆ. ಚಿಮ್ಮುವ ಕಾರಂಜಿ ಮಾಡಲಾಗಿದೆ. ಮುಖ್ಯದ್ವಾರದ ಬಾಗಿಲು, ಸುತ್ತಲೂ ತಡೆಗೋಡೆ ಮಾಡಲಾಗಿದೆ. ಉದ್ಯಾನ ರಕ್ಷಣೆಗೆ ಸಿಬ್ಬಂದಿಯನ್ನು ನೇಮಿಸಲಾಗಿದೆ.
ಇದೀಗ ಪುರಸಭೆ ಅಧಿಕಾರಿಗಳ, ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಇದೀಗ ಗಿಡ, ಮರಗಳು ಒಣಗಿವೆ. ಹಚ್ಚಹಸಿರಿನಿಂದ ಕಂಗೊಳಿಸಿದ್ದ ಒಣ ಹುಲ್ಲು, ಕಳೆ ಗಿಡಗಳು, ಮುಳ್ಳಿನ ಗಿಡಗಳು ಬೆಳೆದಿವೆ. ವಾಯುವಿಹಾರದ ಪಥಗಳಲ್ಲಿ ಸ್ವಚ್ಛತೆ ಇಲ್ಲ. ಜಾರುಬಂಡೆ ಸೇರಿದಂತೆ ವಿವಿಧ ಆಟದ ಸಾಮಾನು ನೆಲ ಕಚ್ಚಿದೆ.
ಕೊಳವೆಬಾವಿಯಲ್ಲಿ ಇದೀಗ ನೀರು ಇಲ್ಲ. ಇದೀಗ ಹಚ್ಚಹಸಿರಿನ ಹುಲ್ಲು, ಒಣಕಡ್ಡಿಗಳಂತಾಗಿದೆ. ಸುಂದರವಾದ ವಿವಿಧ ಬಗೆಯ ಹೂವಿನ, ಹಣ್ಣಿನ ಗಿಡಗಳು ಬೋಳಾಗಿವೆ. ಕೂರುವ ಆಸನಗಳು ಮುರಿದಿವೆ. ಶೆಡ್ ಸುತ್ತಲೂ ಜನರು ಕೂರಲು ಹಾಕಿದ್ದ ಬಂಡೆಗಳು ಮುರಿದಿವೆ.
ಕೊಳವೆಬಾವಿಯ ಸುತ್ತಲೂ ಕಳೆ, ಮುಳ್ಳಿನ ಗಿಡಗಳು ಬೆಳೆದಿವೆ. ವಿದ್ಯುತ್ ತಂತಿಗಳು ನೆಲ ಕಚ್ಚಿವೆ. ಕೊಳಾಯಿಗಳು ಮುರಿದಿವೆ. ನೀರು ಇಲ್ಲದ ಕಾರಣ ಚಿಮ್ಮುವ ಕಾರಂಜಿ ಒಣಗಿದೆ.
ಆರು ಎಕರೆ ಪ್ರದೇಶದಲ್ಲಿ ಸುಂದರವಾಗಿದ್ದ ಚಿತ್ರಾವತಿ ಎಕೋ ಉದ್ಯಾನವನ್ನು ಪುರಸಭೆ ಅಧಿಕಾರಿಗಳು ಅಭಿವೃದ್ಧಿಪಡಿಸಿಲ್ಲ. ಹಚ್ಚ ಹಸಿರಿನ ಹುಲ್ಲು ಇದೀಗ ಒಣಗಿರುವುದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಎಂದು ರೈತ ಮುಖಂಡ ಜಿ.ಎಂ.ರಾಮಕೃಷ್ಣಪ್ಪ ಹೇಳಿದರು.
ಉದ್ಯಾನ ನಿರ್ವಹಣೆ ಹೊತ್ತ ಅಧಿಕಾರಿಗಳು, ಸರ್ಕಾರದ ಅನುದಾನ ಬಳಕೆ ಮಾಡಿ ಅಭಿವೃದ್ಧಿಪಡಿಸಬೇಕು ಎಂದು ಕೊಂಡರೆಡ್ಡಿಪಲ್ಲಿ ಗ್ರಾಮದ ನಿವಾಸಿ ಮಂಜು ಒತ್ತಾಯಿಸಿದರು.
ಪಟ್ಟಣದಲ್ಲಿ ಉದ್ಯಾನ ಇಲ್ಲ. ವಾಯುವಿಹಾರ ಮಾಡಲು ಜಾಗದ ಕೊರತೆ ಇದೆ. ಚಿತ್ರಾವತಿ ಎಕೋ ಉದ್ಯಾನವನ್ನು ಅಧಿಕಾರಿಗಳು ಅಭಿವೃದ್ಧಿಪಡಿಸಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ತಾಲ್ಲೂಕು ಅಧ್ಯಕ್ಷೆ ಬಿ.ಸಾವಿತ್ರಮ್ಮ ಆಗ್ರಹಿಸಿದರು.
ಚಿತ್ರಾವತಿ ಎಕೋ ಉದ್ಯಾನಕ್ಕೆ ಭೇಟಿನೀಡಿ ಪರಿಶೀಲಿಸಲಾಗುವುದು. ಕೊಳವೆಬಾವಿ ರಿಪೇರಿ ಮಾಡಿಸಿ ಗಿಡಗಳಿಗೆ ನೀರು ಹರಿಸಲಾಗುವುದು. ಸರ್ಕಾರದ ಅನುದಾನ ಬಂದ ತಕ್ಷಣವೇ ಹಂತ ಹಂತದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ‘ಪ್ರಜಾವಾಣಿ’ ಗೆ ಪ್ರತಿಕ್ರಿಯಿಸಿದರು.
ಮುರಿದುಬಿದ್ದ ಪಥಗಳು, ಆಟಿಕೆ ಒಣಗಿದ ಚಿಮ್ಮುವ ಕಾರಂಜಿ ಕೆಟ್ಟಿದ ಕೊಳವೆಬಾವಿ, ಒಣಗಿದ ಗಿಡ ಮರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.