ಚಿಂತಾಮಣಿ: ಕೆಲಸ ಕೊಡುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ಸ್ನಾತಕೋತ್ತರ ವಿದ್ಯಾರ್ಥಿನಿಯಿಂದ ₹4.21 ಲಕ್ಷ ಪಡೆದು ವಂಚಿಸಿದ್ದಾನೆ ಎಂದು ಗ್ರಾಮಾಂತರ ಠಾಣೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ತಾಲ್ಲೂಕಿನ ಎನ್.ಕೊತ್ತೂರು ಗ್ರಾಮದ ನಿವಾಸಿ ಕೆ.ಎನ್.ಸುಮಾ ಹಣ ಕಳೆದುಕೊಂಡು ಪೊಲೀಸ್ ಠಾಣೆಗೆ ದೂರು ನೀಡಿರುವ ವಿದ್ಯಾರ್ಥಿನಿ.
ಪ್ರಸ್ತುತ ಶಿಡ್ಲಘಟ್ಟ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಎಂ.ಕಾಂ ವ್ಯಾಸಂಗ ಮಾಡುತ್ತಿದ್ದಾರೆ. ಜೂನ್ 24ರಂದು ಬಿ.ಎ.ವಿಶ್ವನಾಥ್ ಎಂಬುವವರು ದೂರವಾಣಿ ಕರೆ ಮಾಡಿ, ನಿಮ್ಮ ಊರಿನ ಕಡೆ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ಪ್ರಸ್ತುತ ಶಿಡ್ಲಘಟ್ಟದಲ್ಲಿ ಕಂದಾಯ ನಿರೀಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ನೀವು ಬಡವರಾಗಿದ್ದು ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದು, ಮೆರಿಟ್ ಆಧಾರದ ಮೇಲೆ ಎಸ್.ಎಸ್.ಟೆಲಿಕಮ್ಯೂನಿಕೇಷನ್ ಪ್ರೈವೇಟ್ ಲಿಮಿಟೆಡ್ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ₹6,100 ಶುಲ್ಕ ನೀಡಬೇಕು ಎಂದು ತಿಳಿಸಿದ್ದಾರೆ.
ಜೂನ್ 24 ರಂದು ₹6,100 ಪೋನ್ ಪೇ ಮೂಲಕ ಅವರು ತಿಳಿಸಿದ ನಂಬರ್ಗೆ ವರ್ಗಾಯಿಸಿದ್ದಾರೆ. 26 ರಂದು ಮತ್ತೆ ₹19,500 ಪಡೆದುಕೊಂಡಿದ್ದಾರೆ. ಹೀಗೆ ಪ್ರತಿನಿತ್ಯ ಪೋನ್ ಮಾಡಿ ವಿವಿಧ ಹೇಳಿಕೆಗಳಿಂದ ನಂಬಿಸಿ ಜುಲೈ 20 ರವರೆಗೆ ₹4.21 ಲಕ್ಷ ಲಪಟಾಯಿಸಿದ್ದಾರೆ. ವಿಶ್ವನಾಥ್ ಮೋಸ ಮಾಡಿದ್ದಾರೆ ಎಂದು ಮನದಟ್ಟಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಹಣ ವಾಪಸ್ ಕೊಡಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.