ಚಿಂತಾಮಣಿ: ತಾಲ್ಲೂಕಿನ ಕೆಂಪದೇನಹಳ್ಳಿ ಗ್ರಾಮದ ಡೇರಿಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಶಿಷ್ಟಾಚಾರ ಪಾಲನೆ ಆಗಿಲ್ಲ ಎಂಬ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.
ಗಲಾಟೆಯಲ್ಲಿ ನೂಕಾಟ, ತಳ್ಳಾಟ ನಡೆದು ಕೆಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೂಬಸ್ತ್ ನಿಯೋಜಿಸಲಾಗಿದೆ.
ಸೋಮವಾರ ಡೇರಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು. ಡೇರಿಯ ಆಡಳಿತ ಮಂಡಳಿಯು ಜೆಡಿಎಸ್ ವಶದಲ್ಲಿದೆ. ಉದ್ಘಾಟನಾ ಫಲಕದಲ್ಲಿ ಶಾಸಕರು, ಕೋಚಿಮುಲ್ ನಿರ್ದೇಶಕ ಹೆಸರು ಮತ್ತು ಡೇರಿಯ ನಿರ್ದೇಶಕರ ಹೆಸರು ಹಾಕಲಾಗಿತ್ತು. ಗ್ರಾಮ ಪಂಚಾಯಿತಿ ಸದಸ್ಯರ ಹೆಸರು ಹಾಕಿಲ್ಲ ಎಂಬ ಅಸಮಾಧಾನ ಭಿನ್ನಮತ ಸೃಷ್ಟಿಯಾಗಿತ್ತು.
ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಒಂದು ಗುಂಪಿನ ಸದಸ್ಯರು ಪ್ರತಿಭಟನೆ ನಡೆಸಿದರು. ಮತ್ತೊಂದು ಗುಂಪು ಯಾವುದೇ ಉಲ್ಲಂಘನೆ ನಡೆದಿಲ್ಲ ಎಂದು ಮತ್ತೊಂದು ಗುಂಪು ವಾದಿಸಿತು.
ಭಾನುವಾರವೇ ಕೆಲವರು ನಾಮಫಲಕ ಒಡೆದು ಧ್ವಂಸ ಮಾಡಿದ್ದರು. ಈ ಬಗ್ಗೆ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿತ್ತು. ಗ್ರಾಮದಲ್ಲಿ ಪೊಲೀಸರು ಬೀಡುಬಿಟ್ಟಿದ್ದರು. ಸೋಮವಾರ ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಸಕ ಎಂ.ಕೃಷ್ಣಾರೆಡ್ಡಿ ಮತ್ತು ಕೋಚಿಮುಲ್ ನಿರ್ದೇಶಕ ಅಶ್ವತ್ಥನಾರಾಯಣಬಾಬು ಗೈರು ಹಾಜರಾಗಿದ್ದರು.
ಗ್ರಾಮದ ಡೇರಿಯ ಅಭಿವೃದ್ಧಿಗೆ ಯಾವ ಸಂಬಂಧವೂ ಇಲ್ಲದ ಶಾಸಕರು ಮತ್ತು ಕೋಚಿಮುಲ್ ನಿರ್ದೇಶಕರ ಹೆಸರನ್ನು ನಾಮಫಲಕದಲ್ಲಿ ಹಾಕಲಾಗಿದೆ. ಡೇರಿಯ ಅಭಿವೃದ್ಧಿಗೆ ಶ್ರಮಿಸಿರುವ ಗ್ರಾಮ ಪಂಚಾಯಿತಿ ಸದಸ್ಯರ ಹೆಸರನ್ನು ಹಾಕಿಲ್ಲ ಎಂದು ಗ್ರಾ.ಪಂ ಸದಸ್ಯರು ಆರೋಪಿಸಿದರು.
‘ಗ್ರಾಮದ ಹಿರಿಯರ ಮೂಲಕ ಸಂಧಾನ ನಡೆಸಲಾಗಿತ್ತು. ನಾಮಫಲಕದಲ್ಲಿ ಹೆಸರು ಸೇರಿಸುವುದಾಗಿ ಅವರು ಭರವಸೆ ನೀಡಿದ್ದರು. ನಂತರ ಹಿರಿಯರೂ ನುಣುಚಿಕೊಂಡರು’ ಎಂದು ಅಸಮಾಧಾನಗೊಂಡ ಸದಸ್ಯರು ಆರೋಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.