ಚಿಂತಾಮಣಿ: ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಅಮರನಾರಾಯಣ ನಗರದ ವಿವಿಧ ನಿರಾಶ್ರಿತ ಹಾಗೂ ವಲಸಿತರ ಕೇಂದ್ರಗಳಿಗೆ ಭೇಟಿ ನೀಡಿ ನಿರಾಶ್ರಿತರ ಆರೋಗ್ಯ, ಚಿಕಿತ್ಸೆ ಹಾಗೂ ಮೂಲಸೌಲಭ್ಯಗಳ ಪರಿಶೀಲನೆ ನಡೆಸಿದರು.
ನಗರದ ತಾಲ್ಲೂಕು ಕಚೇರಿ ಹಿಂಭಾಗದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದಲ್ಲಿ ಆಶ್ರಯ ಕಲ್ಪಿಸಿರುವ ನಿರಾಶ್ರಿತರೊಂದಿಗೆ ಮಾತುಕತೆ ನಡೆಸಿದರು. ಅವರಿಗೆ ನೀಡುತ್ತಿರುವ ಆಹಾರ ಹಾಗೂ ದಿನನಿತ್ಯ ಅಗತ್ಯವಿರುವ ವಸ್ತುಗಳನ್ನು ನೀಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.
ನಿರಾಶ್ರಿತರಿಗೆ ಸೂಕ್ತ ಆರೋಗ್ಯ ತಪಾಸಣೆ ನಡೆಸಬೇಕು. ಮಾಸ್ಕ್, ಸೋಪುಗಳನ್ನು ಕ್ರಮಬದ್ಧವಾಗಿ ನೀಡಬೇಕು. ಒಬ್ಬರಿಂದ ಒಬ್ಬರಿಗೆ ಅಂತರವನ್ನು ಕಾಪಾಡುವಂತೆ ಸೂಚಿಸಬೇಕು. ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಕೋಲಾರ ಕ್ರಾಸ್ನ ಚೌಡೇಶ್ವರಿ ದೇವಾಲಯದ ಬಳಿಯ ಶಿಬಿರ ಹಾಗೂ ಮುರುಗಮಲ್ಲ ರಸ್ತೆಯಲ್ಲಿರುವ ಕರಿಯಪ್ಪಲ್ಲಿ ಶಿಬಿರಕ್ಕೂ ಭೇಟಿ ನೀಡಿ ನಿರಾಶ್ರಿತರೊಂದಿಗೆ ಸಂವಾದ ನಡೆಸಿದರು.
ಜಿಲ್ಲಾಡಳಿತ ಎಲ್ಲ ವ್ಯವಸ್ಥೆಯನ್ನು ಮಾಡಿದೆ. ಅಗತ್ಯ ಸಲಹೆ, ಸೂಚನೆಗಳನ್ನು ನೀಡಲಾಗಿದೆ ಎಂದು ನ್ಯಾಯಾಧೀಶರು ಸುದ್ಧಿಗಾರರಿಗೆ ತಿಳಿಸಿದರು.
ಚಿಕ್ಕಬಳ್ಳಾಪುರದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ್, ಸ್ಥಳೀಯ ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಕೆ.ಎಂ.ರಾಜೇಂದ್ರ ಕುಮಾರ್, ಎಚ್.ಎ.ಸಾತ್ವಿಕ್, ನಗರಸಭೆಯ ಉಮಾಶಂಕರ್, ಕಂದಾಯ ಇಲಾಖೆಯ ಅಂಬರೀಶ್ ಇದ್ದರು.