ಗೌರಿಬಿದನೂರು: ‘ನಮ್ಮ ನೆಲ, ಜಲ, ಪರಿಸರ ಸಂರಕ್ಷಣೆಗಾಗಿ ಜನಪದ ಕಲೆಯ ಬಗ್ಗೆ ಇಂದಿನ ಯುವಜನತೆ ಹೆಚ್ಚಿನ ಆಸಕ್ತಿ ತೋರಿದಲ್ಲಿ ಮಾತ್ರ ದೇಶೀಯ ಸಂಸ್ಕೃತಿಯನ್ನು ಉಳಿಯಲು ಸಾಧ್ಯ’ ಎಂದು ಮುಖ್ಯಶಿಕ್ಷಕ ಸಿ.ಎಚ್. ದೇವರಾಜಯ್ಯ ತಿಳಿಸಿದರು.
ತಾಲ್ಲೂಕಿನ ಕಾದಲವೇಣಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಆಯೋಜಿಸಿದ್ದ ‘ಜಾನಪದದ ಕಡೆಗೆ ನಮ್ಮ ನಡಿಗೆ’ ಎಂಬ ಕಾರ್ಯಕ್ರಮವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸಕ್ತ ದಿನಮಾನಗಳಲ್ಲಿ ನೆಲ, ಜಲ, ಪರಿಸರ ಸಂರಕ್ಷಣೆ ನಮ್ಮ ಹೊಣೆಗಾರಿಕೆಯಾಗಬೇಕು. ಭೂಮಿ ತಾಯಿ ಸಾಕಷ್ಟು ನೋವು ಸಹಿಸಿಕೊಂಡು ನಮ್ಮನ್ನು ಸಾಕುತ್ತಿದ್ದಾಳೆ. ಭೂಮಿಯು ರಾಸಾಯನಿಕ ವಸ್ತುಗಳ ಮಿಶ್ರಣದ ಬಳಕೆಯಿಂದ ಕಲುಷಿತಗೊಂಡಿದ್ದು ಇದರ ಪರಿಹಾರಕ್ಕೆ ಪರಿಸರ ಸಂರಕ್ಷಣೆಯೊಂದೇ ದಾರಿಯಾಗಿದೆ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪರಿಸರ ಅಧ್ಯಯನವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ವೈ.ಟಿ. ಪ್ರಸನ್ನಕುಮಾರ್ ಮಾತನಾಡಿ, ಸಂಘದ ವತಿಯಿಂದ ಕಳೆದ ದಶಕದಿಂದ ಜನಪದ ಪರಿಸರ ಬೀದಿನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಯೋಜನೆ ಮಾಡಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯ ನಿರಂತರವಾಗಿದೆ. ವಿದ್ಯಾರ್ಥಿಗಳು ಇದರ ಬಗ್ಗೆ ತಿಳಿದುಕೊಂಡು ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ಮಾಡಿದಾಗ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಲಾವಿದ ಚಂದ್ರಶೇಖರ್ ಜನಪದ, ಲಾವಣಿ, ಗೀಗಿಪದ, ಪರಿಸರ ಗೀತೆಗಳ ಮೂಲಕ ಕಾರ್ಯಕ್ರಮಕ್ಕೆ ಮೆಗುಗು ನೀಡಿದರು.