ಗೌರಿಬಿದನೂರು: ದೇವರಿಗೆ ಹಣ ಕಟ್ಟದ ಕಾರಣ ಶವ ಸಂಸ್ಕಾರಕ್ಕೆ ಅಡ್ಡಿ ಮಾಡಿದ್ದ ಪ್ರಸಂಗವು ವರದಿಯಾಗಿದ್ದ ನಗರದ ಗೊಟಕನಾಪುರ ಗ್ರಾಮಕ್ಕೆ ತಹಶೀಲ್ದಾರ್ ಮಹೇಶ್ ಪತ್ರಿ ಸೋಮವಾರ ಭೇಟಿ ನೀಡಿದರು. ಇಂತಹ ನಡವಳಿಕೆಗಳು ಮತ್ತೆ ಕಂಡು ಬಂದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಸಮುದಾಯದ ಮುಖಂಡರಿಗೆ ಎಚ್ಚರಿಕೆ ನೀಡಿದರು.
‘ದೇವರಿಗೆ ಹಣ ಕಟ್ಟದ ಕಾರಣ ಶವ ಸಂಸ್ಕಾರಕ್ಕೆ ಅಡ್ಡಿ’ ಶೀರ್ಷಿಕೆ ಅಡಿಯಲ್ಲಿ ಸೋಮವಾರ ‘ಪ್ರಜಾವಾಣಿ’ಯಲ್ಲಿ ಸುದ್ದಿ ಪ್ರಕಟವಾಗಿತ್ತು.
‘ಮೌಢ್ಯ ಮತ್ತು ಕಂದಾಚಾರಗಳಿಗೆ 21ನೇ ಶತಮಾನದಲ್ಲಿ ಅವಕಾಶವಿಲ್ಲ. ತಾಲ್ಲೂಕು ಆಡಳಿತ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಸಿದ್ದವಿದೆ. ಆದರೆ ಈ ರೀತಿಯ ಪ್ರಕರಣಗಳು ಮತ್ತೆ ಮುಂದುವರಿದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರರು ಎಚ್ಚರಿಕೆ ನೀಡಿದರು.
ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಚಿನ್ನಪ್ಪ ಗೌಡ ನಾಯ್ಕರ್, ಗ್ರಾಮಸ್ಥರು ಮತ್ತು ಸಮುದಾಯದ ಮುಖಂಡರ ಜೊತೆ ಸುದೀರ್ಘವಾಗಿ ಚರ್ಚಿಸಿದರು. ಮೌಢ್ಯ ಮತ್ತು ಕಾನೂನು ಕ್ರಮಗಳ ಬಗ್ಗೆ ಚರ್ಚಿಸಿದರು. ಮತ್ತೆ ಈ ರೀತಿಯ ಘಟನೆಗಳು ಮರುಕಳಿಸಬಾರದು ಎಂದರು.
ವೃತ್ತ ನಿರೀಕ್ಷಕ ಕೆ. ಪಿ. ಸತ್ಯನಾರಾಯಣ, ನಗರಸಭೆ ಪೌರಾಯುಕ್ತೆ ಎಂ. ಡಿ. ಗೀತಾ ಹಾಗೂ ಆದಿ ಕರ್ನಾಟಕ ಸಮುದಾಯದ ಮುಖಂಡರು ಇದ್ದರು.