ಗೌರಿಬಿದನೂರು: ತಾಲ್ಲೂಕಿನ ಮುದುಗೆರೆ ಗ್ರಾಮದಲ್ಲಿ ಶುಕ್ರವಾರ ಎಂ.ಜಿ.ಪ್ರಭುದೇವ್ ಅವರಿಗೆ ಸೇರಿದ ಜಾನುವಾರುಗಳ ಮೇವಿನ ಬಣವೆಗೆ ಬೆಂಕಿ ಬಿದ್ದ ಪರಿಣಾಮವಾಗಿ ಸುಮಾರು ₹60 ಸಾವಿರ ಬೆಲೆಯ 20 ಲೋಡ್ ಜೋಳದ ಹುಲ್ಲು ಬೆಂಕಿಗೆ ಆಹುತಿಯಾಗಿದೆ.
ಗ್ರಾಮದ ಪಂಚಾಯಿತಿ ಕಾರ್ಯಾಲಯದ ಹಿಂಭಾಗದಲ್ಲಿರುವ ಅವರ ಮೇವಿನ ಬಣವೆಗೆ ಆಕಸ್ಮಿಕವಾಗಿ ಬಿದ್ದ ಬೆಂಕಿಯಿಂದ ಈ ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಗ್ರಾ.ಪಂ ಸದಸ್ಯ ಎಂ.ಎಸ್.ರಾಜಶೇಖರ್ ಮಾತನಾಡಿ, ‘ಈ ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಈ ಅವಘಡದಿಂದ ಮಾನಸಿಕವಾಗಿ ಕುಂದಿರುವ ರೈತರಿಗೆ ಸರ್ಕಾರವು ಸೂಕ್ತ ಪರಿಹಾರ ಕಲ್ಪಿಸಲು ಮುಂದಾಗಬೇಕಾಗಿದೆ’ ಎಂದು ಹೇಳಿದರು.