ಶಿಡ್ಲಘಟ್ಟ: ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯರು ನಗರದ ವಿವಿಧ ಭಾಗಗಳಲ್ಲಿ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತಿದ್ದಾರೆ. ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಗರಸಭಾ ಸದಸ್ಯ ಮುನಿರಾಜು ಸಲಹೆ ನೀಡಿದರು.
ನಗರದ ಕುರುಬರಪೇಟೆಯ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಿಂದ ನಡೆದ ವಿಶೇಷ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕುರುಬರಪೇಟೆಗೆ ತಜ್ಞ ದಂತ ವೈದ್ಯರು ಆಗಮಿಸಿದ್ದಾರೆ. ಹಲ್ಲುಗಳ ಆರೋಗ್ಯ ಬಹಳ ಮುಖ್ಯ. ಇಂತಹ ವಿಷಯದ ಬಗ್ಗೆ ಬಹಳಷ್ಟು ಮಂದಿಗೆ ಅರಿವಿರುವುದಿಲ್ಲ. ಶಿಬಿರದ ಮೂಲಕ ಜನರಲ್ಲಿ ಹಲ್ಲುಗಳ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಹಲ್ಲು ನೋವು ಬಂದಾಗ ವೈದ್ಯರ ಬಳಿ ಹೋಗುವುದಕ್ಕಿಂತ, ಮೊದಲೇ ಅದನ್ನು ಪರೀಕ್ಷಿಸಿಕೊಳ್ಳುವುದು ಉತ್ತಮ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ದಂತ ವೈದ್ಯ ಡಾ.ಅಂಬಾದಾಸ್, ಡಾ.ಭರತ್, ಡಾ.ಅಭಿಲಾಷ್, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯಾದ ಸಿ. ವಿಜಯ, ಅಲಮೇಲು ಮಂಗಮ್ಮ, ಜೀವಿತಾ, ಭ್ರಮರಾಂಬಿಕಾ, ಮಂಜುನಾಥ್, ದೀಪಾ, ದರ್ಶಿನಿ, ಅಂಗನವಾಡಿ ಕಾರ್ಯಕರ್ತೆ ಅನಿತಾಬಾಯಿ ಹಾಜರಿದ್ದರು.