ಚಿಂತಾಮಣಿ: ತಾಲ್ಲೂಕಿನ ಕಸಬಾ ಹೋಬಳಿಯ ದೊಡ್ಡಬೊಮ್ಮನಹಳ್ಳಿ ರಸ್ತೆಯ ಇಕ್ಕೆಲಗಳಲ್ಲಿದ್ದ ಮರಗಳನ್ನು ಅಕ್ರಮವಾಗಿ ಮಾರಣಹೋಮ ಮಾಡಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ 3 ಜೆಸಿಬಿ ಮತ್ತು ಒಂದು ಕ್ಯಾಂಟರ್ ವಶಪಡಿಸಿಕೊಂಡಿದ್ದಾರೆ.
ದೊಡ್ಡಬೊಮ್ಮನಹಳ್ಳಿ-ಸೀಕಲ್ ಗ್ರಾಮದ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ಸುಮಾರು 50-60 ಬೃಹತ್ ಮರಗಳನ್ನು ರಸ್ತೆಯ ವಿಸ್ತರಣೆ ನೆಪದಲ್ಲಿ ಕೆಲವರು ರಾತ್ರೋರಾತ್ರಿ ಅಕ್ರಮವಾಗಿ ಕಡಿದುಹಾಕಿ ಸಾಕಾಣಿಕೆ ಮಾಡಿಕೊಂಡಿದ್ದಾರೆ ಎಂದು ಗ್ರಾಮದ ಕೆಲವರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.
ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್, ಉಪವಲಯ ಅರಣ್ಯಾಧಿಕಾರಿ ಧನಲಕ್ಷ್ಮೀ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ದೂರು ನಿಜವಾಗಿತ್ತು. ಮರಗಳನ್ನು ಕಡಿದು ತುಂಡು ಗಳನ್ನು ಕ್ಯಾಂಟರ್ನಲ್ಲಿ ತುಂಬಿಸಿದ್ದರು. ಅರಣ್ಯ ಅಧಿಕಾರಿಗಳು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
‘ರಸ್ತೆ ಮಾಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ. 20 ವರ್ಷಗಳಿಂದ ರಸ್ತೆ ಹಾಳಾಗಿದೆ. ರಸ್ತೆ ದುರಸ್ತಿಗೊಳಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಆದರೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಂದು ರಸ್ತೆಯ ಬಗ್ಗೆ ಗುರುತು ಮಾಡಿಲ್ಲ. ಸುಮಾರು 50 ವರ್ಷಗಳ ಹಿಂದೆ ಬೆಳೆಸಿದ್ದ ನೂರಾರು ಮರಗಳನ್ನು ರಾತ್ರೋರಾತ್ರಿ ಕಡಿದು ಹಾಕಿ ಪರಿಸರವನ್ನು ನಾಶಪಡಿಸಿರುವುದಕ್ಕೆ ಮಾತ್ರ ವಿರೋಧಿಸುತ್ತಿದ್ದೇವೆ’ ಎಂದು ಸೀಕಲ್ ಗ್ರಾಮದ ನರೇಂದ್ರ ತಿಳಿಸಿದರು.
‘ರಸ್ತೆ ಕಾಮಗಾರಿಗೆ ಯಾರು ಚಾಲನೆ ನೀಡಿಲ್ಲ. ರಸ್ತೆಯ ಕಾಮಗಾರಿಗೆ ಯಾವುದೇ ಪೂರ್ವ ಸಿದ್ಧತೆ ಕೈಗೊಂಡಿಲ್ಲ. ಮರಗಳ ಕುರಿತು ಅರಣ್ಯ ಇಲಾಖೆಯ ಅನುಮತಿ ಪಡೆದಿಲ್ಲ. ಕಡಿದ ಮರಗಳನ್ನು ಯಾರು ಸಾಗಾಣಿಕೆ ಮಾಡಿದ್ದಾರೆ ಎಂಬುದರ ಬಗ್ಗೆಯೂ ಮಾಹಿತಿ ಇಲ್ಲ. ಸಾಧ್ಯವಾದಷ್ಟು ಮರಗಳನ್ನು ಉಳಿಸಿ ರಸ್ತೆ ಮಾಡಬೇಕು’ ಎಂದು ದೊಡ್ಡಬೊಮ್ಮನ ಹಳ್ಳಿಯ ಸೊಣ್ಣೇಗೌಡ ತಿಳಿಸಿದರು.
‘ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಮರಗಳನ್ನು ಕಡಿದಿರುವುದು ನಿಜ. ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಪೂರ್ಣವಾಗಿ ತನಿಖೆ ನಡೆಸಿ ಕಾನೂನಿನಂತೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದು ವಲಯ ಅರಣ್ಯ ಇಲಾಖೆಯ ಅಧಿಕಾರಿ ಶ್ರೀನಿವಾಸ್ ತಿಳಿಸಿದರು.