ಶಿಡ್ಲಘಟ್ಟ: ನಗರದ ತಾಲ್ಲೂಕು ಕಚೇರಿಯಲ್ಲಿ ಶನಿವಾರ ಶಾಸಕ ವಿ. ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಭೆ ಕರೆಯಲಾಗಿತ್ತು.
ಈ ಸಭೆಗೆ ಭಾಗವಹಿಸಲು ದಲಿತ ಸಂಘಟನೆಗಳ ಒಕ್ಕೂಟದಿಂದ ಎಲ್ಲಾ ಮುಖಂಡರು ಒಗ್ಗೂಡಿ ಪ್ರವಾಸಿ ಮಂದಿರದಲ್ಲಿ ಸೇರಿ ಚರ್ಚಿಸಿ ತೋಟಗಾರಿಕೆ ಇಲಾಖೆಯ ಸ್ಥಳದಲ್ಲಿ ಸ್ಥಳ ನಿಗದಿಪಡಿಸಬೇಕೆಂದು ಸಭೆಯಲ್ಲಿ ಮಂಡಿಸಲು ತೀರ್ಮಾನಿಸಿದರು. ತಾಲ್ಲೂಕು ಕಚೇರಿಯಲ್ಲಿ ಸಭೆ ನಡೆಸದೇ ಶಾಸಕ ಮುನಿಯಪ್ಪ ಅವರು ಪ್ರವಾಸಿ ಮಂದಿರದ ಹೊರಗೆ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರೊಂದಿಗೆ ಈ ಬಗ್ಗೆ ಚರ್ಚಿಸಿದರು.
ಮುನಿಯಪ್ಪ ಮಾತನಾಡಿ, ನೀವು ಕೇಳುತ್ತಿರುವ ತೋಟಗಾರಿಕೆಯ ಸ್ಥಳ ನೀಡಲು ಆಗುವುದಿಲ್ಲ. ತಾಲ್ಲೂಕು ಕಚೇರಿ ಮುಂಭಾಗದಲ್ಲೇ ತೋಟಗಾರಿಕೆ ಇಲಾಖೆ ಇದೆ. ಈಗಾಗಲೇ ಭವನ ನಿರ್ಮಿಸಲು ಸರ್ಕಾರದಿಂದ ಹಣ ಮಂಜೂರಾಗಿದೆ. ಆದ್ದರಿಂದ ನಗರದ ಹೊರ ಭಾಗದಲ್ಲಿ ಭವನಕ್ಕೆ ಸೂಚಿಸಲಾದ ಸ್ಥಳದಲ್ಲಿ ನಿರ್ಮಿಸುವ ಮೂಲಕ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಎಲ್ಲರೂ ಇದಕ್ಕೆ ಸಹಕರಿಸಿ ಎಂದರು.
ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಗಂಜಿಗುಂಟೆ ಮೂರ್ತಿ ಮಾತನಾಡಿ, ‘ಅಂಬೇಡ್ಕರ್ ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ. ಅಂಬೇಡ್ಕರ್ ಭವನ ನಿರ್ಮಾಣವಾದರೆ ನಗರದಲ್ಲಿ ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುತ್ತದೆ ಎಂದರು.
ತಹಶೀಲ್ದಾರ್ ಅರುಂಧತಿ, ಸರ್ಕಲ್ ಇನ್ಸ್ಪೆಕ್ಟರ್ ಸುರೇಶ್, ನಗರ ಠಾಣೆ ಪಿಎಸ್ಐ ಸತೀಶ್, ಶಿರಸ್ತೇದಾರ್ ಮಂಜುನಾಥ್, ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ಈಧರೆ ಪ್ರಕಾಶ್, ಕೆ.ಎಸ್. ದ್ಯಾವಕೃಷ್ಣಪ್ಪ, ನಾಗನರಸಿಂಹ ಇದ್ದರು.