ಚಿಕ್ಕಬಳ್ಳಾಪುರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಜೀವ ವಿಮಾ ಪ್ರತಿನಿಧಿಗಳು ನಗರದ ಎಲ್ಐಸಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು.ಎಲ್ಐಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ವಿಮಾ ಪ್ರತಿನಿಧಿಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಎಲ್ಐಸಿ ಪ್ರತಿನಿಧಿಗಳಒಕ್ಕೂಟದ ಚಿಕ್ಕಬಳ್ಳಾಪುರ ಶಾಖೆ ಮಾಜಿ ಅಧ್ಯಕ್ಷ ಎಂ.ಸೋಮಶೇಖರ್ ಮಾತನಾಡಿ, ಪಾಲಿಸಿದಾರರಿಂದ ಎಲ್ಐಸಿ ಸಂಸ್ಥೆ ದೇಶದಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ. ಸಂಸ್ಥೆ ಪ್ರತಿನಿಧಿಗಳು ಹಾಗೂ ಪಾಲಿಸಿದಾರರ ಬೇಡಿಕೆ ಈಡೇರಿಸಿದರೆ ಸಂಸ್ಥೆ ಇನ್ನಷ್ಟು ಬಲಿಷ್ಠಗೊಳ್ಳಲಿದೆ. ಆದರೆ, ಬೇಡಿಕೆಗಳನ್ನು ಈಡೇರಿಸುವಂತೆ ಸಂಸ್ಥೆಗೆ ಹಲವು ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸ್ಥೆ ಪ್ರತಿನಿಧಿಗಳಿಗೆ ಹಾಗೂ ಪಾಲಿಸಿದಾರರಿಗೆ ಬೋನಸ್ ಹೆಚ್ಚಿಸಬೇಕು. ತಡವಾಗಿ ವಿಮಾ ಕಂತು ಪಾವತಿ ಮಾಡಿದರೆ ಅದರ ಮೇಲಿನ ಜಿಎಸ್ಟಿ ಕಡಿಮೆ ಮಾಡಬೇಕು. ಕಂತಿನ ಮೇಲಿನ ಜಿಎಸ್ಟಿ ರದ್ದುಗೊಳಿಸಬೇಕು. ಪಾಲಿಸಿದಾರರ ಸಾಲಕ್ಕೆ ಬಡ್ಡಿ ಕಡಿಮೆ ಮಾಡಬೇಕು. ಜಿಎಎಸ್ಟಿಯನ್ನು ವಿಮೆಗೆ ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.
ನಮ್ಮ ಬೇಡಿಕೆಗಳು ಈಡೇರದಿದ್ದರೆ ಮತ್ತೆ ಸೆ.30ರಂದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಒಕ್ಕೂಟದ ವಲಯ ಕಾರ್ಯಕಾರಿ ಸಮಿತಿ ಸದಸ್ಯ ಲಕ್ಷ್ಮಣ್, ಉಪಾಧ್ಯಕ್ಷರಾದ ಕೆ.ಎಂ.ವೆಂಕಟಶಿವಾರೆಡ್ಡಿ, ಕೆ.ಎಲ್.ವೆಂಕಟೇಶ್, ಪದಾಧಿಕಾರಿಗಳಾದ ವೆಂಕಟೇಶ್ ಪ್ರಸಾದ್, ರಾಮಚಂದ್ರರೆಡ್ಡಿ, ಗುರುರಾಜ್, ರಮೇಶ್ ಗುಪ್ತ, ಅಂಟೋನಿ ಸ್ವಾಮಿ, ಆನಂದ್ ನಾಗರಾಜ್ ಇತರರುಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.