ಚಿಕ್ಕಬಳ್ಳಾಪುರ: ದೇಶ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯಿಂದ ದೇಶ ಅಧೋಗತಿಯತ್ತ ಹೋಗುತ್ತಿದೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಕೆ.ಪಿ.ಬಚ್ಚೇಗೌಡ ಟೀಕಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕಾಗಿ ಬಿಜೆಪಿಯಲ್ಲಿ ಕಚ್ಚಾಟ ಹೆಚ್ಚಿದೆ. ಈ ಹಿಂದೆ ಪೆಟ್ರೋಲ್ ಬೆಲೆ ₹ 60 ಇದ್ದಾಗ ಬಿಜೆಪಿಯವರು ದೇಶದಾದ್ಯಂತ ಪ್ರತಿಭಟಿಸಿದ್ದರು. ಈಗ ₹ 100 ದಾಟಿದೆ. ಡೀಸೆಲ್ ಬೆಲೆಯೂ ಹೆಚ್ಚಿದೆ. ಪ್ರಪಂಚದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಭಾರತದಲ್ಲಿ ಮಾತ್ರ ಇಷ್ಟೊಂದು ಹೆಚ್ಚಿದೆ ಎಂದು ದೂರಿದರು.
ಇಂಧನ ಬೆಲೆ ಹೆಚ್ಚಳ ಹಾಗೂ ರಾಜ್ಯ ಸರ್ಕಾರದ ವಿದ್ಯುತ್ ದರ ಹೆಚ್ಚಳ ಖಂಡಿಸಿ ಗುರುವಾರ ಬೆಳಿಗ್ಗೆ 10ಜ್ಜೆ ಜಿಲ್ಲಾಧಿಕಾರಿ ಕಚೇರಿ ಎದುರು ಜೆಡಿಎಸ್ನಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆ ನಂತರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ತಾಲ್ಲೂಕು ಮಟ್ಟದಲ್ಲಿಯೂ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು. ಹೆಚ್ಚು ಜನರನ್ನು ಸೇರಿಸುವುದಿಲ್ಲ. ಕೇಂದ್ರ ಮತ್ತ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ದಾಖಲಿಸಬೇಕು ಎನ್ನುವುದೇ ಪಕ್ಷದ ವರಿಷ್ಠರ ಉದ್ದೇಶ. ಕೊರೊನಾ ಸಂಕಷ್ಟದ ನಡುವೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಿದೆ. ಜನ ಸಾಮಾನ್ಯರಿಗೆ ಹೊರೆ ಆಗುತ್ತಿದೆ. ಇಂಧನ ಬೆಲೆ ಹೆಚ್ಚಳದಿಂದ ಸಾಗಾಣಿಕೆ ವೆಚ್ಚ ಹೆಚ್ಚುತ್ತದೆ. ಆಗ ಸಹಜವಾಗಿ ಎಲ್ಲ ವಸ್ತುಗಳ ಬೆಲೆಯೂ ಏರಿಕೆ ಕಾಣುತ್ತದೆ ಎಂದರು.
ಕೋವಿಡ್ ನಿರ್ವಹಣೆಯಲ್ಲಿಯೂ ರಾಜ್ಯ ಸರ್ಕಾರ ವಿಫಲವಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಅಭಿವೃದ್ಧಿಗೆ ಅನುಕೂಲ ಎಂದು ಜನರು ತಿಳಿಸಿದ್ದರು. ಆದರೆ ಅಭಿವೃದ್ಧಿ ಗೌಣವಾಗಿದೆ. ಕೇಂದ್ರವು ರಾಜ್ಯದ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷೆ ವೀಣಾ, ತಾ.ಪಂ ಸದಸ್ಯ ವೆಂಕಟೇಶ್, ಪಕ್ಷದ ಪ್ರಧಾನ ಕಾರ್ಯದರ್ಶಿ ನಾರಾಯಣ ಸ್ವಾಮಿ, ಕೃಷ್ಣಪ್ಪ, ಸಾದಿಕ್, ಶ್ರೀಧರ್ ಕೊಂಡೇನಹಳ್ಳಿ ಗೋಷ್ಠಿಯಲ್ಲಿ ಇದ್ದರು.