ಚಿಂತಾಮಣಿ: ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಕನಂಪಲ್ಲಿ ಕೆರೆ ತುಂಬಿ ಕೋಡಿಬಿದ್ದಿರುವ ಹಿನ್ನೆಲೆಯಲ್ಲಿ ಶಾಸಕ ಎಂ.ಕೃಷ್ಣಾರೆಡ್ಡಿ ದಂಪತಿ ಮತ್ತು ಅಧಿಕಾರಿಗಳು ಸೋಮವಾರ ಗಂಗಾ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ನೀರು ಪೂರೈಕೆಗೆ ಪ್ರಮುಖ ಜಲಮೂಲವಾಗಿರುವ ಕನಂಪಲ್ಲಿ ಕೆರೆ ಕೆಲವು ದಿನಗಳಿಂದ ಬೀಳುತ್ತಿರುವ ಮಳೆಗೆ ಕೋಡಿ ಹರಿಯುತ್ತಿದೆ. ಕಳೆದ ಮೂರು ವರ್ಷಗಳಿಂದ ಸತತವಾಗಿ ಕೆರೆ ತುಂಬಿ ಕೋಡಿ ಹರಿಯುತ್ತಿರುವುದು ನಾಗರಿಕರಿಗೆ ಮತ್ತು ಅಧಿಕಾರಿಗಳಿಗೆ ಸಂತಸ ತಂದಿದೆ. ಶಾಸಕ ಎಂ.ಕೃಷ್ಣಾರೆಡ್ಡಿ ದಂಪತಿಗಳು ತಮ್ಮ ಬೆಂಬಲಿಗರೊಂದಿಗೆ ವಿಶೇಷ ಪೊಜೆ ಸಲ್ಲಿಸಿ, ಪ್ರತಿವರ್ಷ ತಾಲ್ಲೂಕಿನ ಎಲ್ಲಾ ಕೆರೆಗಳು ತುಂಬಿ ಕೋಡಿ ಹರಿಯಲಿ ಎಂದು ಪ್ರಾರ್ಥಿಸಿದರು.
ಸೋಮವಾರ ಬೆಳಿಗ್ಗೆ ಪಂಡಿತರು, ಮಂಗಳವಾದ್ಯಗಳೊಂದಿಗೆ ಕೆರೆಗೆ ತೆರಳಿ ವಿಶೇಷ ಪೊಜೆ ನೆರವೇರಿಸಿದರು.
ಗಂಗಾಮಾತೆಯ ಮೂರ್ತಿ ಅಭಿಷೇಕ, ಪೂಜೆ ಮತ್ತಿತರ ಧಾರ್ಮಿಕ ಕೈಕಂರ್ಯಗಳನ್ನು ಶ್ರದ್ಧಾ ಭಕ್ತಿ ಮತ್ತು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ವಿಶೇಷವಾಗಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.
ನಂತರ ಗಂಗಾಮಾತೆ ಮೂರ್ತಿಯನ್ನು ಅಲಂಕೃತ ತೆಪ್ಪದಲ್ಲಿ ಪ್ರತಿಷ್ಠಾಪಿಸಿ ಕೆರೆ ಪ್ರದಕ್ಷಣೆ ಹಾಕಲಾಯಿತು. ನಂತರ ನಾರಸಿಂಹಪೇಟೆಯ ಗ್ರಾಮದೇವತೆ ಗಂಗಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ಅಲಂಕೃತ ಪಲ್ಲಕ್ಕಿ ಮೂಲಕ ಕೆರೆಯ ಸುತ್ತ ವಾದ್ಯಮೇದಗಳೊಂದಿಗೆ ಮೆರವಣಿಗೆ ಮಾಡಲಾಯಿತು.
ಬಳಿಕ ಶಾಸಕ ಎಂ.ಕೃಷ್ಣಾರೆಡ್ಡಿ ಅವರ ಪತ್ನಿ ರೂಪಾರೆಡ್ಡಿ, ತಹಶೀಲ್ದಾರ್ ಹನುಮಂತರಾಯಪ್ಪ, ಪೌರಾಯುಕ್ತ ಉಮಾಶಂಕರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಶಿಶು ಅಭಿವೃದ್ಧಿ ಅಧಿಕಾರಿ ಮಹೇಂದ್ರ ಬಾಗಿನ ಸಮರ್ಪಣೆ ಮಾಡಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ದಿನ್ನಮಿಂದಹಳ್ಳಿ ಬೈರರೆಡ್ಡಿ, ನಗರಸಭೆ ಸದಸ್ಯರಾದ ಸಿಕೆ.ಶಬ್ಬೀರ್, ಅಗ್ರಹಾರ ಮುರಳಿ, ಮಂಜುನಾಥ್, ದೇವಳಂ ಶಂಕರ್, ಮಾಜಿ ಸದಸ್ಯರಾದ ಅಬ್ಬುಗುಂಡು ಶ್ರೀನಿವಾಸರೆಡ್ಡಿ, ಪ್ರಕಾಶ್, ವೆಂಕಟರವಣಪ್ಪ, ನಗರಸಭೆಯ ಮಾಜಿ ಅಧ್ಯಕ್ಷ ಎಂ.ಎನ್.ವೆಂಕಟರೆಡ್ಡಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಗುಡೇಶ್ರೀನಿವಾಸರೆಡ್ಡಿ, ಮುಖಂಡರಾದ ವಿ.ಅಮರ್, ಸಿ.ಆರ್.ಬಾಬು, ನಗರಸಭೆಯ ಜೆಡಿಎಸ್ ಪಕ್ಷದ ಹಾಲಿ ಮತ್ತು ಮಾಜಿ ಸದಸ್ಯರು ನಗರಸಭೆ ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು.
ಕೆರೆ ಕೋಡಿ ಜಲಧಾರೆ ಕಣ್ತುಂಬಿಸಿಕೊಳ್ಳಲು ನಗರ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರು ಆಗಮಿಸಿದ್ದರು. ಕೋಡಿ ಹರಿಯುತ್ತಿರುವ ನೀರಿನಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯಗಳು
ಸಾಮಾನ್ಯವಾಗಿದ್ದವು.
ನೀರಿನ ಸಮಸ್ಯೆಗೆ ಪರಿಹಾರ
‘ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕನಂಪಲ್ಲಿ ಕೆರೆ ಐದನೇ ಬಾರಿಗೆ ತುಂಬಿ ಕೋಡಿ ಹರಿಯುತಿರುವುದು ಸಂತಸದ ಸಂಗತಿ. ಪ್ರತಿವರ್ಷ ಇದೇ ರೀತಿ ತಾಲೂಕಿನ ಎಲ್ಲಾ ಕೆರೆಗಳು ತುಂಬಿ ಕೋಡಿ ಹರಿದು ಜನಜಾನುವಾರುಗಳು ಸುಖಶಾಂತಿ ನೆಮ್ಮಂದಿಯಿಂದ ಬಾಳಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗಿದೆ. ಕೆರೆ ತುಂಬಿ ಕೋಡಿ ಹರಿಯುತ್ತಿರುವುದರಿಂದ ನಗರದ ಶೇ.75 ರಷ್ಟು ಭಾಗದ ನೀರಿನ ಸಮಸ್ಯೆ ಕಡಿಮೆಯಾಗಲಿದೆ’ ಎಂದುಶಾಸಕ ಎಂ.ಕೃಷ್ಣಾರೆಡ್ಡಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.