ಬಾಗೇಪಲ್ಲಿ: ಈ ಬಾರಿಯ ಬೇಸಿಗೆಯಲ್ಲಿ ವಾಡಿಕೆಗಿಂತಲೂ ಹೆಚ್ಚು ಬಿಸಲಿನ ತಾಪಮಾನ ಹೆಚ್ಚಾಗಿದ್ದು, ಹಸಿರು ಮೇವು ಮತ್ತು ಕುಡಿಯುವ ನೀರಿಲ್ಲದೆ ಜಾನುವಾರುಗಳು ಬಳಲಿವೆ.
ಬಹುತೇಕ ಕೃಷಿಕರು ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿದ್ದಾರೆ. ಹಸಿರು ಮೇವು ಮಾತ್ರವಲ್ಲದೆ ಒಣ ಮೇವು ಕೊರತೆ ಆಗಿರುವುದು ಹೈನುದಾರರಿಗೆ ಸಂಕಷ್ಟ ತಂದಿದೆ. ಕುರಿ, ಮೇಕೆ, ಹಸು, ಎಮ್ಮೆ ಸೇರಿದಂತೆ ಜಾನುವಾರು ಸಾಕಣಿಕೆ ಮಾಡುವವರಿಗೆ ಮೇವು, ನೀರು ಒದಗಿಸುದೇ ದೊಡ್ಡ ಸವಾಲಾಗಿದೆ.
ತಾಲ್ಲೂಕಿನಲ್ಲಿ ತಾಪಮಾನ 39 ಡಿಗ್ರಿ ಸೆಲ್ಷಿಯಸ್ ನಷ್ಟಿದ್ದು, ತಾಪಕ್ಕೆ ಭೂಮಿಯು ಕಾದ ಕೆಂಡದಂತೆ ಆಗುತ್ತಿದೆ. ಇದರಿಂದ ತಾಲ್ಲೂಕಿನ ಕೆರೆ, ಕುಂಟೆಗಳಲ್ಲಿ ನೀರು ಬರಿದಾಗಿದ್ದು, ಬರಡಾಗಿದೆ.
ಗೋಮಾಳ, ಹೊಲ ಗದ್ದೆಗಳಲ್ಲಿ, ಬಯಲು ಪ್ರದೇಶ, ಕೆರೆ ಅಚ್ಚುಕಟ್ಟು ಪ್ರದೇಶ ಸೇರಿದಂತೆ ಗುಡ್ಡಗಾಡು ಪ್ರದೇಶದಲ್ಲಿ ಹಸಿರು ಹುಲ್ಲು ಬಿಸಿಲಿನ ತಾಪಮಾನಕ್ಕೆ ಒಣಗಿದೆ. ಇದರಿಂದ ಜಾನುವಾರುಗಳಿಗೆ ಹಸಿರು ಮೇವು ಸಿಗದೆ, ಹಾಲಿನ ಉತ್ಪಾದನೆ ಕಡಿಮೆಯಾಗಿದೆ.
ಪ್ರತಿದಿನ ಊರಿನ ಬಯಲು, ಹೊಲ ಗದ್ದೆಗಳಲ್ಲಿ, ಬೆಟ್ಟ-ಗುಡ್ಡಗಳಲ್ಲಿ, ಕೆರೆ, ಕಾಲುವೆಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಜಾನುವಾರು ಮೇಯಿಸಲಾಗುತ್ತಿತು. ಇದೀಗ ಮಧ್ಯಾಹ್ನ 11 ಗಂಟೆಯಿಂದ 3 ಗಂಟೆಯವರಿಗೂ ಬಿಸಿಲಿನ ಶಾಖ ಹೆಚ್ಚಾಗಿರುವುದರಿಂದ ಜಾನುವಾರುಗಳನ್ನು ಗಿಡ ಮರದ ಕೆಳಗೆ ವಿಶ್ರಾಂತಿಗೆ ಬಿಡುತ್ತಾರೆ.
ಮಳೆ ಬಾರದೆ ಇರುವುದರಿಂದ ಜಾನುವಾರುಗಳಿಗೆ ಮೇವು–ನೀರು ಸಿಗುತ್ತಿಲ್ಲ. ಮೇವಿನ ಕೊರತೆಯಿಂದ ಕುರಿಗಳನ್ನು ಮಾರಾಟ ಮಾಡಿದ್ದೇವೆ–ಶ್ರೀರಾಮ, ಕುರಿ ಸಾಗಾಣಿಕೆದಾರ ಪೋತೇಪಲ್ಲಿ
ಬಿರು ಬೇಸಿಗೆಯ ಪ್ರತಿಕೂಲ ಹವಾಮಾನ ಜಾನುವಾರುಗಳ ಮೇಲೆ ದುಷ್ಪರಿಣಾಮ ಬೀರಿದೆ. ಹಸಿರು ಮೇವು ಸಿಗದೇ ಹಾಲು ಉತ್ಪಾದನೆ ಕಡಿಮೆಯಾಗಿದೆ.– ಟಿ.ಲಕ್ಷ್ಮೀನಾರಾಯಣರೆಡ್ಡಿ, ರೈತ
ತಾಲ್ಲೂಕಿನಲ್ಲಿ ಮೇವಿನ ಕೊರತೆ ಇಲ್ಲ. ಆದರೆ ನೀರಿನ ಕೊರತೆ ಇದೆ. ಕಡಿಮೆ ಜಾನುವಾರುಗಳ ಸಂಖ್ಯೆ ಇರುವುದರಿಂದ ಮೇವಿನ ಬ್ಯಾಂಕ್ ಅವಶ್ಯಕತೆ ಇಲ್ಲ. 15 ದಿನಗಳ ಒಳಗೆ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಿಸಿದೆ. ತಾಲ್ಲೂಕಿನಲ್ಲಿ ರೈತರಿಗೆ ಮತ್ತು ಹೈನುದಾರರಿಗೆ ಮೇವಿನ ಬೀಜ ವಿತರಿಸಲಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೃಷ್ಣಮೂರ್ತಿ ‘ಪ್ರಜಾವಾಣಿಗೆ’ ಪ್ರತಿಕ್ರಿಯಿಸಿದ್ದಾರೆ.
ಮೇವು ಬ್ಯಾಂಕ್ ತೆರೆಯಿರಿ ರೈತರಿಗೆ ಹಸಿ ಹುಲ್ಲಿನ ಬೀಜ ವಿತರಣೆ ಮಾಡಬೇಕು. ಮೇವು ಬ್ಯಾಂಕ್ ತೆರೆಯಬೇಕು. ಜನ ಹಾಗೂ ಜಾನುವಾರುಗಳಿಗೆ ಮೇವು ಹಾಗೂ ನೀರು ಸಮರ್ಪಕವಾಗಿ ಕಲ್ಪಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಎಚ್.ಎನ್.ಗೋವಿಂದರೆಡ್ಡಿ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.