ಅವಕಾಶ ಕೈ ಚೆಲ್ಲುತ್ತಿದ್ದಾರೆಯೇ ಪ್ರದೀಪ್?
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮೇಲೆ ದೊಡ್ಡಮಟ್ಟದಲ್ಲಿ ಪ್ರಭಾವ ಇಟ್ಟುಕೊಳ್ಳಲು ಶಾಸಕ ಪ್ರದೀಪ್ ಈಶ್ವರ್ಗೆ ಹಲವು ಅವಕಾಶಗಳು ಇವೆ. ಈ ಉತ್ತಮ ಅವಕಾಶಗಳನ್ನು ಶಾಸಕರು ಕೈ ಚೆಲ್ಲುತ್ತಿದ್ದಾರೆ ಎನ್ನುವ ವಿಶ್ಲೇಷಣೆಯೂ ಕ್ಷೇತ್ರದ ರಾಜಕೀಯ ವಲಯದಲ್ಲಿ ಇದೆ. ಕ್ಷೇತ್ರದಲ್ಲಿ ಅಹಿಂದ ಮತದಾರರ ಸಂಖ್ಯೆ ದೊಡ್ಡದಿದೆ. ರಾಜ್ಯ ಮಟ್ಟದಲ್ಲಿ ಬಲಿಜ ಸಮುದಾಯಕ್ಕೆ ಶಾಸಕರ ನಾಯಕತ್ವದ ಕೊರತೆಯೂ ಇದೆ. ‘ನಮಸ್ತೆ ಚಿಕ್ಕಬಳ್ಳಾಪುರ’ದ ಮೂಲಕ ಪ್ರದೀಪ್ ಭರವಸೆಗಳನ್ನು ಮೂಡಿಸಿದ್ದರು. ಸುಲಭವಾಗಿ ಜನರ ಕೈಗೆ ಸಿಗುವರು ದ್ವೇಷ ರಾಜಕೀಯ ಮಾಡುವುದಿಲ್ಲ ಎನ್ನುವ ಮಾತುಗಳು ಆರಂಭದಲ್ಲಿ ಇದ್ದವು. ಹೀಗೆ ನಾನಾ ರೀತಿಯ ‘ಮತಲೆಕ್ಕ’ದ ಮೂಲಕ ಚಿಕ್ಕಬಳ್ಳಾಪುರ ರಾಜಕಾರಣವನ್ನು ತಮ್ಮ ತೆಕ್ಕೆಯಲ್ಲಿ ಇಟ್ಟುಕೊಳ್ಳಲು ಅವಕಾಶಗಳು ಇವೆ. ಆದರೆ ಶಾಸಕರ ನಡೆಗಳು ಮತಗಳು ‘ಕೈ’ ಚೆಲ್ಲುವಂತೆ ಮಾಡಿದೆ ಎನ್ನುವ ವಿಶ್ಲೇಷಣೆ ಜೋರಾಗಿದೆ.