ಚಿಕ್ಕಬಳ್ಳಾಪುರ: ‘ಕೋವಿಡ್ 19 ಹರಡುವುದು ತಡೆಗಟ್ಟುವ ನಿಟ್ಟಿನಲ್ಲಿ ನಗರದಲ್ಲಿ ಕಡ್ಡಾಯವಾಗಿ ಸ್ವಚ್ಚತೆ ಕಾಪಾಡಬೇಕು. ಪ್ರತಿದಿನ ಒಂದೊಂದು ವಾರ್ಡ್ಗೆ ಖುದ್ದಾಗಿ ಭೇಟಿ ನೀಡಿ ಸ್ವಚ್ಚತೆ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಕೋವಿಡ್ 19 ಮತ್ತು ಸ್ವಚ್ಛತೆಗೆ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿ ವಾರ್ಡ್ಗೆ ನೇಮಕಗೊಂಡಿರುವ ನೋಡಲ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಕೋವಿಡ್ ಕುರಿತು ಅರಿವು ಮೂಡಿಸಬೇಕು’ ಎಂದು ತಿಳಿಸಿದರು.
‘ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ವಾರ್ಡ್ನ ನಾಗರಿಕರಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಪರೀಕ್ಷೆ ಮಾಡಿಸಬೇಕು. ಪ್ರತಿ ವಾರ್ಡ್ಗೆ ಪ್ರತ್ಯೇಕವಾಗಿ ಸ್ವಚ್ಛತಾ ಕ್ಯಾಪ್ಟನ್ಗಳ ತಂಡವನ್ನು ರಚಿಸಿ ನಗರದಲ್ಲಿನ ಹಸಿ ಮತ್ತು ಒಣ ಕಸ ಪ್ರತ್ಯೇಕವಾಗಿ ಬೇರ್ಪಡಿಸುವುದು ಮತ್ತು ನಗರದಲ್ಲಿ ಕಸ ಸುರಿಯುವ ಸ್ಥಳಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು‘ ಎಂದು ಹೇಳಿದರು.
‘ಪ್ರತಿ ದಿವಸ ಒಂದು ವಾರ್ಡ್ಗೆ ಭೇಟಿ ನೀಡಿ ಸ್ವಚ್ಛತಾ ಕಾರ್ಯ ಪರಿಶೀಲಿಸಲಾಗುತತದೆ. ಶುಚಿತ್ವ ಕಾಪಾಡದವರಿಗೆ ದಂಡ ವಿಧಿಸಲು ನಗರಸಭೆ ಆಯುಕ್ತರು ಕ್ರಮಕೈಗೊಳ್ಳಬೇಕು‘ ಎಂದು ಸೂಚಿಸಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಭಾಸ್ಕರ್, ನಗರಸಭೆ ಆಯುಕ್ತ ಲೋಹಿತ್ ಸಭೆಯಲ್ಲಿ ಹಾಜರಿದ್ದರು.