ಚಿಕ್ಕಬಳ್ಳಾಪುರ: ನಗರದ ಅಂಬೇಡ್ಕರ್ ಭವನದಲ್ಲಿ ಕರುನಾಡ ರಾಜ್ಯ ಕಾರ್ಮಿಕರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಪ್ರದೀಪ್ ಈಶ್ವರ್ ಉದ್ಘಾಟಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವೆ. `ನಮಸ್ತೆ ಚಿಕ್ಕಬಳ್ಳಾಪುರ' ಎಂಬ ಕಾರ್ಯಕ್ರಮದ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸಲಾಗುವುದು. ಎಲ್ಲಾ ಸಚಿವರ ಸಹಕಾರ ಪಡೆದು ಚಿಕ್ಕಬಳ್ಳಾಪುರವನ್ನು ಅಭಿವೃದ್ಧಿಪಡಿಸುತ್ತೇನೆ ಎಂದು ಹೇಳಿದರು.
ಶನಿವಾರವಷ್ಟೇ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಂತೆ ಸಾಮಥ್ರ್ಯ ಸಚಿವ ಸಂಪುಟಕ್ಕೆ ಇದೆ. ಈ ಸಂಪುಟ ದಕ್ಷತೆಯಿಂದ ಕೂಡಿದೆ. ಒಳ್ಳೆಯ ಆಡಳಿತವನ್ನು ಕಾಂಗ್ರೆಸ್ ಸರ್ಕಾರ ನೀಡಲಿದೆ. ಸ್ವಲ್ಪ ಕಾಲಾವಕಾಶ ನೀಡಿದರೆ ಕೊಟ್ಟ ಭರವಸೆಗಳೆಲ್ಲವನ್ನು ಸರ್ಕಾರ ಈಡೇರಿಸಲಿದೆ ಎಂದರು.
ಹೆತ್ತ ತಂದೆ ತಾಯಿಯನ್ನು ಗೌರವಯುತವಾಗಿ ನೋಡಿಕೊಳ್ಳಲಿಲ್ಲ ಎಂದರೆ ಅಂತವರು ಸಮಾಜದಲ್ಲಿ ನಾಗರೀಕರಾಗಲು ಹೇಗೆ ಸಾಧ್ಯ. ಈಗಾಗಲೇ ತಂದೆ ತಾಯಿಯನ್ನು ಅನಾಥಾಶ್ರಮಕ್ಕೆ ಕಳುಹಿಸಿರುವ ಎರಡು ಘಟನೆಗಳು ನನ್ನ ಗಮನಕ್ಕೆ ಬಂದಿದ್ದು, ಯಾರೇ ಆಗಲಿ ತಂದೆ ತಾಯಿ ಮೇಲೆ ದೌರ್ಜನ್ಯ ನಡೆಸಿ ಮನೆಯಿಂದ ಹೊರ ಹಾಕಿ ಅನಾಥಶ್ರಮಕ್ಕೆ ಕಳುಹಿಸಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಚ್ಚರಿಸಿದರು.
ಕಾರ್ಯಕ್ರಮದ ಅಂಗವಾಗಿ ರಕ್ತದಾನ ಶಿಬಿರ, ಮಹಿಳಾ ಕಾರ್ಮಿಕರಿಗೆ ಸೀರೆ, ಅಂಗವಿಕಲರಿಗೆ ವೀಲ್ ಚೇರ್, ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಬೆಲ್ಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ, ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್, ನವೀನ್ ಕುಮಾರ್, ಮುನಿವೀರೇಗೌಡ, ಪ್ರೀತಿ ಹಾಜರಿದ್ದರು.