ಚಿಕ್ಕಬಳ್ಳಾಪುರ: ‘ಬಣ್ಣದ ಲೋಕದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲದಿಂದ ಹಲವು ಯುವಕರು ಸಿನಿಮಾರಂಗದಲ್ಲಿ ಪ್ರಯತ್ನಪಡುತ್ತಲೇ ಇದ್ದಾರೆ. ಆದರೆ ಬೆರಳೆಣಿಕೆಯಷ್ಟು ಜನರು ಮಾತ್ರ ಆ ರಂಗದಲ್ಲಿ ನೆಲೆನಿಂತಿದ್ದು, ‘ನ್ಯೂಟನ್’ ಸಿನಿಮಾದ ಮೂಲಕ ರಾಜಹಂಸ ಅವರು ಸಹ ಸಿನಿಮಾರಂಗದಲ್ಲಿ ನೆಲೆ ನಿಲ್ಲಲಿ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ನಗರದ ಶುಕ್ರವಾರ ಆಯೋಜಿಸಿದ್ದ ಕವಿ ರಾಜಹಂಸ ಅವರ ನಿರ್ದೇಶನದ ಮೊದಲ ಸಿನಿಮಾ ‘ನ್ಯೂಟನ್’ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾಮಾನ್ಯವಾಗಿ ಸಿನಿಮಾ ಕಾರ್ಯಕ್ರಮಗಳು ಬೆಂಗಳೂರಿಗೆ ಸೀಮಿತ. ಆದರೆ ಚಿಕ್ಕಬಳ್ಳಾಪುರದಂತಹ ನಗರದಲ್ಲಿ ರಾಜಹಂಸ ಅವರು ಸಿನಿಮಾ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ಆಯೋಜಿಸಿರುವುದು ವಿಶೇಷ’ ಎಂದು ತಿಳಿಸಿದರು.
ನಿರ್ದೇಶಕ ರಾಜಹಂಸ, ನಾಯಕ ನಟ ರಾಬಿನ್ಸನ್, ಮುಖಂಡ ಯಲುವಹಳ್ಳಿ ರಮೇಶ್, ಚಲನಚಿತ್ರ ನಿರ್ಮಾಪಕರಾದ ಸತ್ಯನಾರಾಯಣಚಾರ್, ಕವಿ ಸುಬ್ಬರಾಯಪ್ಪ, ಲೇಖಕಿ ಪ್ರಭಾ ನಾರಾಯಣಗೌಡ, ಭಗತ್ ಸಿಂಗ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ, ನಿರ್ದೇಶಕ ಆನಂದ್ ಕುಮಾರ್, ನಟ ಪಿ.ಎಸ್.ರಮೇಶ್ ಹಾಜರಿದ್ದರು.