ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾನರ್‌, ಪೋಸ್ಟರ್‌ಗೆ ಇಲ್ಲ ನಿರ್ಬಂಧ!

ಪರವಾನಗಿ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿಪತ್ರ l ಮುಖ್ಯಚುನಾವಣಾಧಿಕಾರಿ ಸೂಚನೆಗೆ ಇಲ್ಲ ಕಿಮ್ಮತ್ತು
Last Updated 20 ಮಾರ್ಚ್ 2023, 7:06 IST
ಅಕ್ಷರ ಗಾತ್ರ

ದೇವನಹಳ್ಳಿ: ರಾಜ್ಯ ಮುಖ್ಯಚುನಾವಣಾಧಿಕಾರಿ ಮನೋಜ್‌ ಕುಮಾರ್ ಮೀನಾ ಅವರು ಪರವಾನಗಿ ಪಡೆಯದೆ ಯಾವುದೇ ರಾಜಕೀಯ ಪಕ್ಷಗಳು ಬ್ಯಾನರ್ ಮತ್ತು ಫೋಸ್ಟರ್‌ ಅಂಟಿಸಿದರೆ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಲು ಸೂಚನೆ ನೀಡಿದರೂ ದೇವನಹಳ್ಳಿಯಲ್ಲಿ ಅವರ ಮಾತಿಗೆ ಕಿಮ್ಮತ್ತಿಲ್ಲದಂತಾಗಿದೆ.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಿಂದ ಪರವಾನಗಿ ಪಡೆಯದೆ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್‌, ಬ್ಯಾನರ್‌ ಇನ್ನಿತರ ಪ್ರಚಾರ ಸಾಮಗ್ರಿ ಅಳವಡಿಸುವಂತಿಲ್ಲ ಎಂಬ ಸ್ಪಷ್ಟ ಕಾನೂನು ಇದ್ದರೂ ಎಲ್ಲವನ್ನು ಕಂಡು ಅಧಿಕಾರಿಗಳು ಸುಮ್ಮನಿದ್ದಾರೆ ಎನ್ನುತ್ತಾರೆ ಸಾರ್ವಜನಿಕರು.

ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು, ಪಕ್ಷದ ಮುಖಂಡರು ದೇವನಹಳ್ಳಿ ಬಿ.ಬಿ ರಸ್ತೆ ಸರ್ಕಾರಿ ಕಚೇರಿಗಳ ಕಾಂಪೌಂಡ್‌ಗಳಿಗೆ ಅಂಟಿಸಿದ್ದಾರೆ. ಇದನ್ನು ಕಂಡು ತಾಲ್ಲೂಕು ಚುನಾವಣಾಧಿಕಾರಿ ಮೌನ ವಹಿಸಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

ಎಎಪಿ ಪಕ್ಷದ ಪೋಸ್ಟರ್‌ಗಳು ತಾಲ್ಲೂಕು ಮಿನಿ ವಿಧಾನ ಸೌಧದ ಮುಂದೆ ರಾರಾಜಿಸುತ್ತಿದೆ. ಇನ್ನೂ ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆಗಳ ಕುರಿತು ಬಿಜೆಪಿಯ ಬೃಹತ್‌ ಪೋಸ್ಟರ್‌ಗಳು ಗ್ರಾಮ ಪಂಚಾಯಿತಿ ಮುಂಭಾಗ, ರಸ್ತೆಗಳ ಬದಿಯಲ್ಲಿ, ರೈಲ್ವೆ ಕೇಳ ಸೇತುವೆಯಲ್ಲಿ ಅಂಟಿಸಿ ನಗರದ ಸ್ವಚ್ಛತೆ ಹಾಳು ಮಾಡಲಾಗುತ್ತಿದೆ ಎಂದು ಸ್ಥಳೀಯರು
ದೂರಿದ್ದಾರೆ.

ನಾಯಕರನ್ನು ಮೆಚ್ಚಿಸಲು ಬ್ಯಾನರ್‌, ಬಂಟಿಗ್ಸ್‌: ದೇವನಹಳ್ಳಿಗೆ ಈಚೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ ಸಮಯದಲ್ಲಿ ಬ್ಯಾನರ್‌, ಬಂಟಿಗ್ಸ್‌ ಹಾಕಲಾಗಿತ್ತು. ಇನ್ನೂ ಜೆಡಿಎಸ್‌ ಯುವ ಪರ್ವ ಕಾರ್ಯಕ್ರಮಕ್ಕಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಕ್ಷದ ಬ್ಯಾನರ್‌, ಧ್ವಜಗಳನ್ನು ಕಟ್ಟಲಾಗಿದೆ. ಆಗಸದೆತ್ತರದ ಬಂಟಿಗ್ಸ್‌ ಹಾಗೆಯೇ ಉಳಿದಿದೆ. ವೆಲ್ತೇರ್‌ ಫೌಂಡೇಷನ್‌ ಕಚೇರಿ ಉದ್ಘಾಟನೆಯಾಗಿ ಎರಡು ಮೂರು ತಿಂಗಳು ಕಳೆದರೂ ದೊಡ್ಡ ಕಟ್‌ ಔಟ್‌ಗಳು ಇನ್ನೂ ತೆರವುಗೊಳಿಸಿಲ್ಲ.

ಪಕ್ಷದ ಚಿಹ್ನೆ ಇರುವ ಬ್ಯಾಗ್‌ನಲ್ಲಿ ಸೀರೆ ಹಂಚಿಕೆ: ಜೆಡಿಎಸ್‌ ಈಗಾಗಲೇ ಉಡುಗೊರೆ ಹಂಚಲು ಪ್ರಾರಂಭಿಸಿದೆ. ಶಾಸಕರ ಪತ್ನಿ ನಾಗರತ್ನ ಅವರು ಈಚೆಗೆ ಗುರುಭವನ ಕಾರ್ಯಕ್ರಮದಲ್ಲಿ ಸರ್ಕಾರಿ ಶಿಕ್ಷಕರಿಗೆ ಸೀರೆ ಉಡುಗೊರೆಯಾಗಿ ನೀಡಿದ್ದರು.

ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ

ಯಾವುದೇ ನಿರ್ದಿಷ್ಟ ವ್ಯಕ್ತಿ ಭಾವಚಿತ್ರ ಅಥವಾ ಪಕ್ಷದ ಚಿಹ್ನೆ ಹೊಂದಿರುವ ಉಡುಗೊರೆ ವಿತರಣೆ, ಸಾಗಾಣಿಕೆ ಹಾಗೂ ದಾಸ್ತಾನು ಕಂಡು ಬಂದರೆ ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸಬೇಕು. ಮತದಾರರಿಗೆ ಆಮಿಷಕ್ಕಾಗಿ ಉಡುಗೊರೆ ಹಾಗೂ ಸಾಮೂಹಿಕ ಊಟದ ವ್ಯವಸ್ಥೆ ಮಾಡುವುದನ್ನು ಕಡ್ಡಾಯವಾಗಿ ನಿರ್ಬಂಧಿಸಬೇಕು. ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎನ್ನುತ್ತಾರೆ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಅಧ್ಯಕ್ಷ ಸುಧಾಕರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT