ಗೌರಿಬಿದನೂರು: ಕೊರೊನಾ ಸೋಂಕಿನಿಂದ ಮೃತಪಟ್ಟವರನ್ನು ತಾಲ್ಲೂಕಿನ ಡಿ.ಪಾಳ್ಯ ಹೋಬಳಿಯ ನಾಮಗೊಂಡ್ಲು ಗ್ರಾಮದ ಹೊರವಲಯದಲ್ಲಿ ಹೂಳಲು ಪ್ರತ್ಯೇಕ ಸರ್ಕಾರಿ ಭೂಮಿ ನಿಗದಿಪಡಿಸಿರುವ ಬಗ್ಗೆ ಭಾನುವಾರ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನಲ್ಲಿ ಕೋವಿಡ್– 19 ಸೋಂಕಿತರ ಹಾಗೂ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಜನವಸತಿ ಪ್ರದೇಶದಿಂದ ದೂರವಿರುವ ಸರ್ಕಾರಿ ಜಾಗ ಗುರುತಿಸಿ ಮೃತಪಟ್ಟವರನ್ನು ಅಲ್ಲಿ ಹೂಳಲು ಸರ್ಕಾರ ಆದೇಶಿಸಿದೆ. ಅದರಂತೆ ಕಂದಾಯ ಇಲಾಖೆ ಅಧಿಕಾರಿಗಳು ನಾಮಗೊಂಡ್ಲು ಗ್ರಾಮದ ಸರ್ವೆ ನಂಬರ್ 111ರಲ್ಲಿ 3 ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಿ ಕೊರೊನಾ ಸೋಂಕಿನಿಂದ ಮೃತಪಟ್ಟವರನ್ನು ಹೂಳಲು ಎಲ್ಲ ವ್ಯವಸ್ಥೆಯನ್ನು ಮಾಡಿದ್ದರು.
ವಿಷಯ ತಿಳಿದ ಕೂಡಲೇ ಸ್ಥಳೀಯರು ಹಾಗೂ ಸುತ್ತಲಿನ ಗ್ರಾಮಸ್ಥರು ಜಮಾಯಿಸಿ, ಯಾವುದೇ ಕಾರಣಕ್ಕೂ ಕೊರೊನಾ ಸೋಂಕಿನಿಂದ ಮೃತಪಟ್ಟ ಶವಗಳ ನ್ನು ಈ ಭಾಗದಲ್ಲಿ ಹೂಳಲು ಅವ ಕಾಶ ನೀಡುವುದಿಲ್ಲ. ಇದರಿಂದ ಸ್ಥಳೀಯರಿಗೆ ಸೋಂಕು ತಲುಗುವ ಸಾಧ್ಯತೆ ಹೆಚ್ಚಾಗಿರುತ್ತವೆ ಎಂದು ಆಕ್ಷೇಪಿಸಿದರು.
ಕಂದಾಯ ನಿರೀಕ್ಷಕ ಯೋಗೇಶ್ ಬಾಬು ಹಾಗೂ ಪಿಎಸ್ಐ ಲಕ್ಷ್ಮಿನಾರಾಯಣ ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದರು. ಸದ್ಯಕ್ಕೆ ಭಾನುವಾರ ಮೃತಪಟ್ಟ ತಾಲ್ಲೂಕಿನ ಇಬ್ಬರ ಶವಗಳನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.