ಈಪ್ಯಾಸೆಂಜರ್ ರೈಲು 9 ತಿಂಗಳ ನಂತರ ಪುನರಾರಂಭವಾಗಿದ್ದು, ಸೋಮವಾರ ನಗರದ ನಿಲ್ದಾಣಕ್ಕೆ ರೈಲು ಬಂದಾಗ ಪ್ರಯಾಣಿಕರು ಸ್ಟೇಷನ್ ಮಾಸ್ಟರ್ ಮೂಲಕ ಮನವಿ ಸಲ್ಲಿಸಿದರು. ಬಂಗಾರಪೇಟೆ, ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಪ್ರದೇಶಗಳ ಜನರಿಗೆ ಈ ರೈಲಿನ ಸಂಚಾರ ತುಂಬಾ ಅನುಕೂಲಕರವಾಗಿದೆ. ಬಡವರು ಹಾಗೂ ದಿನನಿತ್ಯ ಕೆಲಸಗಳಿಗೆ ಹೋಗುವ ಪ್ರಯಾಣಿಕರು ಕಡಿಮೆ ದರದಲ್ಲಿ ಪ್ರಯಾಣಿಸಬಹುದು. ಜತೆಗೆ ಈ ಭಾಗದ ರೈತರು ತಮ್ಮ ತರಕಾರಿ ಬೆಳೆಗಳ ಉತ್ಪನ್ನಗಳನ್ನು ಸಾಗಿಸಲು ಅನುಕೂಲವಾಗುತ್ತದೆ. ಹೀಗಾಗಿ ಇನ್ನೂ ಹೆಚ್ಚಿನ ರೈಲುಗಳನ್ನು ಓಡಿಸಬೇಕು ಹಾಗೂ ಮೆಜೆಸ್ಟಿಕ್ ಗೆ ಸಂಪರ್ಕ ಕಲ್ಪಿಸಬೇಕು ಎಂದು ಪ್ರಯಾಣಿಕರು ಮನವಿ ಮಾಡಿದರು.