ಚಿಕ್ಕಬಳ್ಳಾಪುರ: ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪಂಕಜ್ಕುಮಾರ್ ನೇತೃತ್ವದ ಕೇಂದ್ರ ಜಲಶಕ್ತಿ ತಂಡದ ಅಧಿಕಾರಿಗಳು ಗುರುವಾರ ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲ್ಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ಜಲ ಮತ್ತು ಅರಣ್ಯ ರಕ್ಷಣೆಗೆ ಸಂಬಂಧಿತ ಕಾಮಗಾರಿಗಳನ್ನು ವೀಕ್ಷಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಬೊಳ್ಳಟ್ಟ ಗ್ರಾಮದ ಕಲ್ಯಾಣಿ, ಮಾಳಮಾಚನಹಳ್ಳಿ ಗ್ರಾಮ ಪಂಚಾಯಿತಿ ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಸ್ಥಾನದ ಹತ್ತಿರ ಇರುವ ನೆಡುತೋಪು, ಹೇಮಾರ್ಲಹಳ್ಳಿಯ ಅರಣ್ಯೀಕರಣ ಮತ್ತು ಗ್ರಾಮೀಣ ಉದ್ಯಾನವನವನ್ನು ವೀಕ್ಷಿಸಿದರು. ನಂತರ ಹೊಸಪೇಟೆ ಗ್ರಾಮ ಪಂಚಾಯಿತಿ ಸುಂಡ್ರಹಳ್ಳಿಯಲ್ಲಿ ಬಹು ಕಮಾನು ಡ್ಯಾಂ ಹಾಗೂ ಮಳಮಾಚನಹಳ್ಳಿಯ ಕಲ್ಯಾಣಿ ಪರಿಶೀಲನೆ ನಡೆಸಿದರು.
ಈ ವೇಳೆ ಪಂಕಜ್ಕುಮಾರ್, ‘ಮಳೆ ನೀರು ಸಂಗ್ರಹಿಸುವ ನಿಟ್ಟಿನಲ್ಲಿ ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ಸಮರ್ಪಕವಾಗಿ ನಡೆಯಬೇಕು. ಕಲ್ಯಾಣಿಗಳನ್ನು ಶುದ್ಧೀಕರಣಗೊಳಿಸಬೇಕು. ಅಣೆಕಟ್ಟುಗಳನ್ನು ನಿರ್ಮಿಸಬೇಕು. ಮಳೆ ನೀರು ಸಂರಕ್ಷಣೆ ಮತ್ತು ಮನೆ ಬಳಕೆ ನೀರಿನ ಮರುಬಳಕೆ ಕುರಿತಂತೆ ಜನರಲ್ಲಿ ಅರಿವು ಮೂಡಿಸಬೇಕು’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್, ಕೇಂದ್ರ ಆಯುಷ್ ಸಚಿವಾಲಯದ ನಿರ್ದೇಶಕರಾದ ಶಶಿ ರಂಜನ್ ಕುಮಾರ್, ಕೇಂದ್ರ ಅಂತರ್ಜಲ ಮಂಡಳಿಯ ತಾಂತ್ರಿಕ ಅಧಿಕಾರಿ ಯು.ಆರ್.ರಾಕಿ, ಎಂಜಿನಿಯರ್ ದಿಲೀಪ್, ಸಹಾಯಕ ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಸುರೇಶ್ ಬಾಬು ಉಪಸ್ಥಿತರಿದ್ದರು.