ಗೌರಿಬಿದನೂರು: ಬಿಸಿಯೂಟ ನೌಕರರ ಬಾಕಿ ವೇತನ ಪಾವತಿ, ಉದ್ಯೋಗ ಭದ್ರತೆ ಒದಗಿಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಬಿಸಿಯೂಟ ನೌಕರರು ಬುಧವಾರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಗಂಗಪ್ಪ ಮಾತನಾಡಿ, ರಾಜ್ಯದಲ್ಲಿ 1.18 ಲಕ್ಷ ಬಡ ಮಹಿಳೆಯರು ಬಿಸಿಯೂಟ ಯೋಜನೆಯಡಿ ದುಡಿಯುತ್ತಿದ್ದಾರೆ. ಶಾಲೆಗಳು ತೆರೆಯದಿರುವ ಕಾರಣ ಬಿಸಿಯೂಟ ಬದಲಿಗೆ ಆಹಾರ ಧಾನ್ಯಗಳನ್ನು ಮಕ್ಕಳ ಮನೆ ಬಾಗಿಲಿಗೆ ಕಾರ್ಯಕರ್ತೆಯರೇ ತಲುಪಿಸುತ್ತಿದ್ದಾರೆ. ಆದರೆ, ಸರ್ಕಾರ ಹಲವು ತಿಂಗಳಿಂದ ವೇತನ ಪಾವತಿಸದೆ ಬೀದಿಪಾಲು ಮಾಡಿದೆ ಎಂದು ದೂರಿದರು.
ಏಪ್ರಿಲ್ನಿಂದ ವೇತನ ನೀಡಿಲ್ಲ. ಇತರ ವಲಯಗಳಿಗೆ ಘೋಷಣೆ ಮಾಡಿರುವಂತೆ ವಿಶೇಷ ಪ್ಯಾಕೇಜ್ಗಳನ್ನು ಸಹ ನೀಡಿಲ್ಲ. ನೌಕರರು ದಯನೀಯ ಸ್ಥಿತಿಗೆ ತಲುಪಿದ್ದಾರೆ. ಆದ್ದರಿಂದ ಬಾಕಿ ವೇತನ ಬಿಡುಗಡೆ ಮಾಡಬೇಕು. ನೌಕರರನ್ನು ಖಾಯಂಗೊಳಿಸಿ ಎಲ್ಲ ಸರ್ಕಾರಿ ಸವಲತ್ತು ಒದಗಿಸಬೇಕು. ಎಲ್ಐಸಿ ಆಧಾರಿತ ಪಿಂಚಣಿ ನೀಡಬೇಕು. ನೌಕರರು ಹಾಗೂ ಅವರ ಕುಟುಂಬಗಳಗೆ ವೈದ್ಯಕೀಯ ವೆಚ್ಚ ಭರಿಸಬೇಕು ಎಂದು ಒತ್ತಾಯಿಸಿದರು.
ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಜೆ.ಸರಸ್ವತಮ್ಮ, ಕಾರ್ಯದರ್ಶಿ ರಾಜಮ್ಮ, ಖಜಾಂಚಿ ಎನ್.ನಾಗವೇಣಿ, ಗೌರಮ್ಮ, ಲಕ್ಷ್ಮಮ್ಮ, ನಾಗಮಣಿ, ಕಾರ್ಮಿಕ ಮುಖಂಡ ಆನೂಡಿ ನಾಗರಾಜು ಇದ್ದರು.