ಚಿಕ್ಕಬಳ್ಳಾಪುರ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಬೆಳೆಗಳು ನಾಶವಾಗಿವೆ. ಇಲ್ಲಿಯವರೆಗೆ ಗರಿಷ್ಠ ಮಳೆಯಾದ ಜಿಲ್ಲೆಗಳ ಪಟ್ಟಿಯಲ್ಲಿ ನೆರೆಯ ಕೋಲಾರವು ಎರಡನೇ ಸ್ಥಾನದಲ್ಲಿ ಇದೆ.
ನೆರೆಯ ಜಿಲ್ಲೆಗಳಾದ ತುಮಕೂರು, ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಅತ್ಯುತ್ತಮವಾಗಿ ಮಳೆ ಆಗಿದೆ. ಆದರೆ ಇಲ್ಲಿಯವರೆಗೆ ಸುರಿದಿರುವ ಮಳೆ ಚಿಕ್ಕಬಳ್ಳಾಪುರ ಜಿಲ್ಲೆಯ ದಾಹವನ್ನು ತಣಿಸಿಲ್ಲ.
ತೀವ್ರ ಬಿಸಿಲು ಮತ್ತು ಬರದಿಂದ ಕಂಗೆಟ್ಟಿರುವ ಜಿಲ್ಲೆಯ ರೈತರು, ಜನರು ಹಾಗೂ ಭೂಮಿಗೆ ಇಲ್ಲಿಯವರೆಗೆ ಸುರಿದಿರುವ ಮಳೆಗಳು ದೊಡ್ಡ ಮಟ್ಟದಲ್ಲಿ ತಂಪು ತಂದಿಲ್ಲ.
2024ರ ಜ.1ರಿಂದ ಮೇ 17ರವರೆಗೆ ಜಿಲ್ಲೆಯಲ್ಲಿ ಬಿದ್ದ ಮಳೆಯ ಪ್ರಮಾಣವನ್ನು ಅಲೋಕಿಸಿದರೆ ಚಿಕ್ಕಬಳ್ಳಾಪುರದಲ್ಲಿ ಮಳೆಯ ಕೊರತೆ ಎದ್ದು ಕಾಣುತ್ತದೆ. ಈ ಅವಧಿಯಲ್ಲಿ 77.1 ಮಿ.ಮೀ ವಾಡಿಕೆ ಮಳೆ ಇತ್ತು. ಆದರೆ ಇಲ್ಲಿಯವರೆಗೆ 52.6 ಮಿ.ಮೀ ಮಳೆ ಸುರಿದಿದೆ. -31.78 ಮಿ.ಮೀ ಮಳೆ ಕೊರತೆ ಇದೆ.
ಜಿಲ್ಲೆಯ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಎಂದು ಸರ್ಕಾರ ಘೋಷಿಸಿದೆ. ಈ ಆರೂ ತಾಲ್ಲೂಕುಗಳಲ್ಲಿ ಇಲ್ಲಿಯವರೆಗೆ ಸುರಿದಿರುವ ಮಳೆಯ ಪ್ರಮಾಣವನ್ನು ನೋಡಿದರೆ ಎಲ್ಲ ಕಡೆಯೂ ವಾಡಿಕೆಗಿಂತ ಕಡಿಮೆ ಮಳೆ ಆಗಿದೆ.
ರಾಜ್ಯ ಹವಾಮಾನ ಇಲಾಖೆಯು ಈ ಹಿಂದಿನ ದಿನಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಕೆಲವು ಜಿಲ್ಲೆಗಳಿಗೆ ಮುನ್ನೆಚ್ಚರಿಕೆ ನೀಡುತ್ತಿತ್ತು. ಆ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರದ ಹೆಸರು ಇಲ್ಲಿಯವರೆಗೂ ಕಂಡೇ ಇಲ್ಲ. ಕೆಲವು ದಿನಗಳ ಹಿಂದೆ ಗೌರಿಬಿದನೂರು ತಾಲ್ಲೂಕಿನ ಕೆಲವು ಭಾಗಗಳಲ್ಲಿ ಮಾತ್ರ ಉತ್ತಮ ಮಳೆ ಆಯಿತು. ಆದರೆ ಜಿಲ್ಲೆಯ ಕೆರೆ, ಕುಂಟೆಗಳಿಗೆ ನೀರು ತರುವ ಕೃಷಿ ಚಟುವಟಿಕೆಗಳನ್ನು ಗರಿಗೆದರಿಸುವಷ್ಟು ಮಳೆ ಇಂದಿಗೂ ಸುರಿದಿಲ್ಲ. ಕೆರೆಗಳಲ್ಲಿ ನೀರು ತಳ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.