ಚಿಕ್ಕಬಳ್ಳಾಪುರದ ಬಿಜಿಎಸ್ ಡಿಪ್ಲೊಮಾ ಕಾಲೇಜಿನ ವಿದ್ಯಾರ್ಥಿ ಗಜೇಂದ್ರ ಆತ್ಮಹತ್ಯೆ ಮಾಡಿಕೊಂಡವರು. ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಹರಿದಾಡುತ್ತಿದೆ. ಸಾವಿನ ನಂತರ ಪೋಷಕರು ಗಜೇಂದ್ರನ ಮೊಬೈಲ್ ಪರಿಶೀಲಿಸಿದ ವೇಳೆ ವಿಡಿಯೊ ದೊರೆತಿದೆ.
ಮೃತನ ಪೋಷಕರು ಮತ್ತು ಸಂಬಂಧಿಕರು ಶುಕ್ರವಾರ ಕಾಲೇಜಿನ ಬಳಿ ಬಂದು ಆಕ್ರೋಶ ವ್ಯಕ್ತಪಡಿಸಿದರು. ಉಪನ್ಯಾಸಕ ಮಂಜುನಾಥ್ ಅವರನ್ನು ಸ್ಥಳಕ್ಕೆ ಕರೆಸಬೇಕು ಎಂದು ಆಗ್ರಹಿಸಿದರು. ಕೆಲ ವಿದ್ಯಾರ್ಥಿಗಳು ಕಾಲೇಜು ಎದುರು ಪ್ರತಿಭಟನೆ ನಡೆಸಿದರು.
ಕಾಲೇಜಿನ ಉಪನ್ಯಾಸಕ ಮಂಜುನಾಥ ವ್ಯಾಸಂಗದ ವಿಚಾರದಲ್ಲಿ ವಿನಾಕಾರಣ ಬೈದು, ಕಿರುಕುಳ ನೀಡುತ್ತಿದ್ದರಿಂದ ನೇಣುಹಾಕಿಕೊಂಡು ಮೃತಪಟ್ಟಿರುವ ಅನುಮಾನವಿದೆ.ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಗಜೇಂದ್ರನ ಪೋಷಕರು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಡಿಯೊದಲ್ಲಿ ಏನಿದೆ: ‘ಡಿಪ್ಲೊಮಾ ಪೂರ್ಣಗೊಳಿಸುತ್ತಾನೆ ಎಂದು ನಮ್ಮ ಅಪ್ಪ, ಅಮ್ಮ ಅಕ್ಕಂದಿರು ತುಂಬಾ ಆಸೆ ಇಟ್ಟುಕೊಂಡಿದ್ದರು. ಆದರೆ ಈ ನನ್ನ ಮಗ ಬಿಡುತ್ತಿಲ್ಲ. ಅವನು ಅಷ್ಟು ಟಾರ್ಚರ್ ಕೊಟ್ಟರೂ ಕಾಲೇಜಿಗೆ ಬಂದಿದ್ದೇನೆ. ಊರಲ್ಲಿ ನನಗೆ ಒಂದು ಮರ್ಯಾದೆ ಇದೆ.
ಎಷ್ಟೊ ಜನರ ಕಾಲೇಜಿಗೆ ಏನಾದರೂ ಸಾಧಿಸಬೇಕು ಎಂದು ಬರುತ್ತಾರೆ. ಆದರೆ ಇಂತಹವರಿಂದ ಹಾಳಾಗುತ್ತಾರೆ. ಎಷ್ಟು ಕಷ್ಟಪಟ್ಟಿರುತ್ತಾರೆ ನಮ್ಮ ಅಪ್ಪ ಅಮ್ಮ. ಅದನ್ನಾದರೂ ನೀವು ಅರ್ಧ ಮಾಡಿಕೊಳ್ಳಬೇಕು. ಬದುಕುವ ಆಸೆ ನನಗೆ ಇಲ್ಲ. ಅವನಿಗೆ ಭಯಪಟ್ಟು ಸಾಯುತ್ತಿಲ್ಲ. ಅವನಾ ನಾನಾ ಎಂದು ನಿಂತಿದ್ದರೆ ಅವನನ್ನು ಕಾಲೇಜಿನಿಂದಲೇ ತೆಗೆಸಬಹುದಿತ್ತು. ಈ ವಿಡಿಯೊ ಆಚೆ ಬರುವುದಿಲ್ಲ ಎಂದು ನನಗೆ ಗೊತ್ತು. ಸ್ವಾಮೀಜಿ ಕಾಲೇಜಿನ ಗೌರವ ಹೋಗುತ್ತದೆ ಎಂದು ಈ ವಿಡಿಯೊ ಆಚೆಗೆ ಬರುವುದಕ್ಕೂ ಬಿಡುವುದಿಲ್ಲ’ ಎಂದು ಗಜೇಂದ್ರ 6.47 ನಿಮಿಷಗಳ ವಿಡಿಯೊ ಮಾಡಿದ್ದಾರೆ.