ಚಿಂತಾಮಣಿ: ‘ಮನೆಗಳ್ಳರಿಂದ ರಕ್ಷಣೆ ಪಡೆಯಲು ಪೊಲೀಸ್ ಇಲಾಖೆಯು ಎಲ್.ಎಚ್.ಎಂ.ಎಸ್ ಎಂಬ ನೂತನ ಯೋಜನೆ ರೂಪಿಸಿದೆ’ ಎಂದು ಡಿವೈಎಸ್ಪಿ ವಿ. ಲಕ್ಷ್ಮಯ್ಯ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ನಗರದ ಸಾರ್ವಜನಿಕರು ಪ್ರವಾಸಕ್ಕೆ ಅಥವಾ ಸಂಬಂಧಿಕರ ಮನೆಗೆ ಹೋಗಬೇಕಾದರೆ ಮನೆಗೆ ಬೀಗ ಹಾಕಿಕೊಂಡು ಹೋಗಲು ಭಯಪಡುತ್ತಿದ್ದರು. ಯಾರನ್ನಾದರೂ ಕಾವಲು ಇಟ್ಟು ಹೋಗಬೇಕಾಗಿತ್ತು. ಇನ್ನು ಮುಂದೆ ಭಯವಿಲ್ಲದೆ ನಿರಾಳವಾಗಿ ಬೀಗ ಹಾಕಿಕೊಂಡು ಪರಸ್ಥಳಕ್ಕೆ ಹೋಗಿಬರಬಹುದು ಎಂದರು.
ಪೊಲೀಸರು ಬೀಗ ಹಾಕಿದ ಮನೆಯ ಮೇಲೆ ಕಣ್ಗಾವಲು ಇಟ್ಟಿರುತ್ತಾರೆ. ಇಂತಹ ಮನೆಗಳ ಮೇಲೆ ಕಣ್ಗಾವಲು ಇಡಲು ಎಲ್.ಎಚ್.ಎಂ.ಎಸ್ ಚಿಕ್ಕಬಳ್ಳಾಪುರ ಪೊಲೀಸ್ ಎಂಬ ಮೊಬೈಲ್ ಆ್ಯಪ್ ರೂಪಿಸಲಾಗಿದೆ. 50 ಅತ್ಯಾಧುನಿಕ ಮೋಷನ್ ಸೆನ್ಸರ್ ಕ್ಯಾಮೆರಾಗಳನ್ನು ಖರೀದಿಸಲಾಗಿದೆ ಎಂದರು.
ಈ ಸೇವೆ ಪಡೆಯಬಯಸುವ ನಾಗರಿಕರು ಪ್ಲೇ ಸ್ಟೋರ್ನಲ್ಲಿರುವ ಎಲ್.ಎಚ್.ಎಂ.ಎಸ್ ಆ್ಯಪ್ ಅನ್ನು ಮೊಬೈಲ್ಗೆ ಅಳವಡಿಸಿಕೊಂಡು ಪೂರ್ಣ ಮಾಹಿತಿ ಸಮೇತ ಹೆಸರನ್ನು ಉಚಿತವಾಗಿ ನೋಂದಾಯಿಸಿಕೊಳ್ಳಬೇಕು. ಮನೆಗೆ ಬೀಗ ಹಾಕಿಕೊಂಡು ಹೋಗುವ ಒಂದು ದಿನ ಮುಂಚೆ ಈ ಆ್ಯಪ್ನಲ್ಲಿ ಆಯ್ಕೆ ಮೂಲಕ ಎಷ್ಟು ದಿನ ಮನೆಗೆ ಬೀಗ ಹಾಕಿರುತ್ತೇವೆ ಎನ್ನುವ ಮಾಹಿತಿ ನೀಡಬೇಕು. ಠಾಣೆಯ ಸಿಬ್ಬಂದಿ ಮನೆಗೆ ಬಂದು ಸಿ.ಸಿ ಕ್ಯಾಮೆರಾ ಅಳವಡಿಸಿ ನಿಗಾ ಇಡುತ್ತಾರೆ ಎಂದು ವಿವರಿಸಿದರು.
ನಗರ ಠಾಣೆಯ ಇನ್ಸ್ಪೆಕ್ಟರ್ ಆನಂದ ಕುಮಾರ್, ತಹಶೀಲ್ದಾರ್ ಹನುಮಂತರಾಯಪ್ಪ, ಸಬ್ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ ಹಾಜರಿದ್ದರು.