ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲ್ಲೂಕಿನ ಜಿ.ಬೊಮ್ಮಸಂದ್ರ ಗ್ರಾಮದ ನಿವಾಸಿ, ಶಿಕ್ಷಕ ಶ್ರೀನಾಥರೆಡ್ಡಿ (34) ಅವರು ತಾಲ್ಲೂಕಿನ ನಂದಿ ಹೋಬಳಿಯ ಜಕ್ಕಲಮಡಗು ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬುಧವಾರ ಬೆಳಿಗ್ಗೆ ಜಲಾಶಯದಲ್ಲಿ ಶವ ಪತ್ತೆಯಾಗಿದೆ.
ಬಾದಿಮರಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರಾಗಿದ್ದ ಶ್ರೀನಾಥರೆಡ್ಡಿ ಅವರು ಸೋಮವಾರ ಶಾಲೆಗೆ ಹಾಜರಾಗಿರಲಿಲ್ಲ. ಸಂಜೆಗೆ ಮನೆಗೂ ಹಿಂತಿರುಗಿರಲಿಲ್ಲ.
ಶ್ರೀನಾಥರೆಡ್ಡಿ ಅವರ ಪತ್ತೆಗಾಗಿ ಕುಟುಂಬದವರು ಹುಡುಕಾಟ ನಡೆಸಿದಾಗ ಅವರ ಬೈಕ್, ಮೊಬೈಲ್ ಜಕ್ಕಲಮಡಗು ಜಲಾಶಯದ ದಂಡೆಯ ಮೇಲೆ ಪತ್ತೆಯಾಗಿದ್ದವು.
ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿ ಸಹಾಯದಿಂದ ಮಂಗಳವಾರ ಕೆರೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಶ್ರೀನಾಥರೆಡ್ಡಿ ಅವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರು ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬದವರು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.