ಶಿಡ್ಲಘಟ್ಟ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಆಗ್ರಹಿಸಿ ಸಿಐಟಿಯು ಮುಖಂಡರ ಬೆಂಬಲದೊಂದಿಗೆ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ನಗರದ ಬಸ್ ನಿಲ್ದಾಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಬಸ್ ನಿಲ್ದಾಣಕ್ಕೆ ವಿವಿಧ ಕಡೆ ಹೋಗಲೆಂದು ಬಂದಿದ್ದ ಪ್ರಯಾಣಿಕರು ಬಸ್ ಇಲ್ಲದೆ ಪರದಾಡುವಂತಾಗಿತ್ತು. ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲೆಂದು ಬಂದವರು ಅತ್ತ ಮನೆಗೆ ಹೋಗುವುದೋ ಇತ್ತ ಖಾಸಗಿ ವಾಹನಗಳಲ್ಲಿ ಹೋಗುವುದೋ ನಿರ್ಧರಿಸಲಾಗದೇ ಕಂಗಾಲಾಗಿದ್ದರು.
‘ನಾವು ಯಾವುದೇ ಕಾರಣಕ್ಕೂ ಕೆಲಸಕ್ಕೆ ಹಾಜರಾಗುವುದಿಲ್ಲ. ನಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಂಡರೂ ಪರವಾಗಿಲ್ಲ. ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡಲೇಬೇಕು. ಇದು ನೌಕರರೇ ಕೈಗೊಂಡಿರುವ ನಿರ್ಧಾರ. ಬೇರೆ ಸಂಘಟನೆಗಳು ಕೂಡ ನಮ್ಮೊಂದಿಗೆ ಕೈ ಜೋಡಿಸಿವೆ’ ಎಂದು ಪ್ರತಿಭಟನೆ ಕೈಗೊಂಡಿದ್ದ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ತಿಳಿಸಿದರು.